ಹೊನ್ನಾವರ: ಕಳೆದ ವರ್ಷ ವಿವಾಹವಾಗಿದ್ದ ಅಕ್ಷತಾ ನಾಯ್ಕ (26) ತವರುಮನೆಯ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಬಾವಿಯ ಬಳಿ ಹಾವು ಕಾಣಿಸಿಕೊಂಡಿದ್ದು, ಅದನ್ನು ನೋಡಲು ಓಡಿದ ಅವರು ಅದೇ ಬಾವಿಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ನಗರಬಸ್ತಿಕೇರಿಯ ಕುಂಟೋಡಿಯ ಅಕ್ಷತಾ ನಾಯ್ಕ ಅವರನ್ನು ಕಳೆದ ವರ್ಷ ಕುದ್ರುಗಿಯ ಮಂಜುನಾಥ ನಾಯ್ಕ ಎಂಬಾತರಿಗೆ ವಿವಾಹ ಮಾಡಿಕೊಡಲಾಗಿತ್ತು. ತಮ್ಮ ಯೋಗೇಶನ ಅನಾರೋಗ್ಯದ ಹಿನ್ನಲೆ ಆತನ ಆರೋಗ್ಯ ವಿಚಾರಿಸಲು ಅಕ್ಷತಾ ತವರುಮನೆಗೆ ಬಂದಿದ್ದರು. ಅಗಸ್ಟ 10ರಂದು ಬೆಳಗ್ಗೆ ಅವರ ತಮ್ಮ ಯೋಗೀಶ ಹಾಗೂ ತಂದೆ ಮಂಜುನಾಥ ನಾಯ್ಕ ಇಬ್ಬರು ತೋಟಕ್ಕೆ ಹೋಗಿದ್ದು, ಮನೆಯಲ್ಲಿ ಅಕ್ಷತಾ ತಾಯಿ ನಿರ್ಮಲಾ ಜೊತೆ ಹರಟುತಿದ್ದಳು. 11 ಗಂಟೆ ವೇಳೆಗೆ ತಾಯಿ ಬಳಿ `ತಿನ್ನಲು ಬಜೆ ಮಾಡು’ ಎಂದಿದ್ದಳು. ಅದರಂತೆ ತಾಯಿ ಅಡುಗೆ ಮನೆಯಲ್ಲಿ ಬಜೆ ಮಾಡಿದ್ದು, ಹಾಲ್ ಒಳಗೆ ಕುಳಿತ ಅಕ್ಷತಾ ಅದನ್ನು ತಿನ್ನುತ್ತಿದ್ದರು.
12 ಗಂಟೆ ವೇಳೆಗೆ `ಬಾವಿ ಬಳಿ ಹಾವು ಬಂದಿದೆ’ ಎಂದು ಕೂಗಿಕೊಂಡ ಅಕ್ಷತಾ ಹಾವು ನೋಡಲು ಬಾವಿ ಕಡೆ ಓಡಿದ್ದು, ಬಾವಿಯ ಕಟ್ಟೆಗೆ ಕೈ ಒರಗಿಕೊಂಡಿದ್ದರು. ಅವರ ಕೈ ಹಾಗೂ ಕಾಲು ಜಾರಿದ ಕಾರಣ ಅದೇ ಬಾವಿಯಲ್ಲಿ ಮುಳುಗಿದರು. ತಕ್ಷಣ ಅವರ ತಾಯಿ ನಿರ್ಮಲಾ ಸಹ ಬಾವಿ ಬಳಿ ಓಡೋಡಿ ಬಂದು ಮಗ ಹಾಗೂ ಪತಿಯನ್ನು ಕರೆದರು. ನಿರ್ಮಲಾ ಅವರ ಪತಿ ಮಂಜುನಾಥ ನಾಯ್ಕ ಸಹ ಬಾವಿಗೆ ಹಾರಿ ಹುಡುಕಿದರೂ ಅಕ್ಷತಾ ಪತ್ತೆಯಾಗಲಿಲ್ಲ.
ಈ ಸುದ್ದಿ ಕೇಳಿ ಧಾವಿಸಿದ ಅಕ್ಕ-ಪಕ್ಕದ ತೋಟದ ಮನೆಯವರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಅಕ್ಷತಾ ಕಾಣಿಸಿದ್ದು, ಆಕೆಯನ್ನು ಮೇಲೆತ್ತಿದರು. ಆದರೆ, ಆ 12.30ರ ವೇಳೆಗಾಗಲೇ ಅಕ್ಷತಾ ಸಾವನಪ್ಪಿದ್ದರು. ತವರಿಗೆ ಬಂದ ಅಕ್ಷತಾ ನಾಗರ ಪಂಚಮಿ ವೇಳೆಯಲ್ಲಿಯೇ ಹಾವು ನೋಡಲು ಹೋಗಿ ಬಾವಿಗೆ ಬಿದ್ದು ಸಾವನಪ್ಪಿದ್ದು ದುರಂತ.






Discussion about this post