ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಭಟ್ಕಳದ ವಿಷ್ಣು ನಾಯ್ಕ ಎಂಬಾತರು ಗಂಭೀರ ಗಾಯಗೊಂಡಿದ್ದು, ಬೈಕಿನಿಂದ ಬಿದ್ದು ಗಾಯಗೊಂಡಿರುವ ಬಗ್ಗೆ ಅವರು ಪೊಲೀಸರಿಗೆ ಸುಳ್ಳು ಹೇಳಿದ್ದರು. ಆದರೆ, ಇದೀಗ ಅವರ ಪತ್ನಿ ಜಯಾ ನಾಯ್ಕ ಆಗಮಿಸಿ ಸತ್ಯ ಬಾಯ್ಬಿಟ್ಟಿದ್ದಾರೆ.
ಜುಲೈ 31ರಂದು ತರ್ನಮಕ್ಕಿ ಕೆಳಗಿನಮನೆಯ ವಿಷ್ಣು ನಾಯ್ಕ ಓಡಿಸುತ್ತಿದ್ದ ಬೈಕಿಗೆ ಇಕೋ ಕಾರು ಡಿಕ್ಕಿಯಾಗಿತ್ತು. ನಾಗರಾಜ ನಾಯ್ಕ ಎಂಬಾತರು ಜಯಾ ನಾಯ್ಕ ಅವರಿಗೆ ಫೋನ್ ಮಾಡಿ ಈ ವಿಷಯ ಮುಟ್ಟಿಸಿದ್ದರು. ಗಾಯಾಳುವನ್ನು RNS ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಹೇಳಿದ್ದರು. ಹೀಗಾಗಿ ಜಯಾ ನಾಯ್ಕ ಸಹ ಆಗ ಆಸ್ಪತ್ರೆಗೆ ಹೋಗಿದ್ದು, ಅಷ್ಟರೊಳಗೆ ಪೊಲೀಸರು ಅಪಘಾತದ ಬಗ್ಗೆ ವಿಷ್ಣು ನಾಯ್ಕ ಅವರ ಹೇಳಿಕೆ ಪಡೆದಿದ್ದರು. `ಕಾರು ಡಿಕ್ಕಿ ಆಗಿದೆ ಎಂದು ಹೇಳಿದರೆ ಕೇಸ್ ಆಗುತ್ತದೆ. ಇದರಿಂದ ನಿಮಗೆ ಸಮಸ್ಯೆ’ ಎಂದು ಕಾರಿನಲ್ಲಿದ್ದವರು ಹೆದರಿಸಿದ ಕಾರಣ ವಿಷ್ಣು ನಾಯ್ಕ ಪೊಲೀಸರ ಬಳಿ ಸುಳ್ಳು ಹೇಳಿದ್ದರು.
`ತಾನೇ ಬೈಕಿನಿಂದ ಬಿದ್ದು ಗಾಯಗೊಂಡೆ’ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಪೊಲೀಸರು ನಿರ್ಲಕ್ಷ್ಯದ ಬೈಕ್ ಚಾಲನೆಯ ಬಗ್ಗೆ ವಿಷ್ಣು ನಾಯ್ಕ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಕೇಸ್ ದಾಖಲಾಗಬಾರದು ಎಂಬ ಕಾರಣಕ್ಕೆ ಸುಳ್ಳು ಹೇಳಿದ್ದ ವಿಷ್ಣು ನಾಯ್ಕ ವಿರುದ್ಧವೇ ಕೇಸ್ ದಾಖಲಾದ ಕಾರಣ ಅವರು ಇನ್ನೊಂದು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಪತ್ನಿಯಲ್ಲಿ ಹೇಳಿಕೊಂಡರು.
ಇದರಿ0ದ ಕೆಂಡಾಮ0ಡಲವಾದ ಜಯಾ ನಾಯ್ಕ ಇದೀಗ ಮತ್ತೆ ಪೊಲೀಸ್ ಠಾಣೆಗೆ ಆಗಮಿಸಿ ಅಂದು ನಡೆದ ಘಟನಾವಳಿಗಳ ಬಗ್ಗೆ ದೂರು ನೀಡಿದ್ದಾರೆ. `ವಿಷ್ಣು ನಾಯ್ಕ ಅವರ ವಾಹನ ಅಪಘಾತಕ್ಕೆ ಇಕೋ ಕಾರು ಕಾರಣ. ಆ ಕಾರಿನ ಮಾಲಕ ಕೆರೆಮನೆಯ ರಾಮ ಶಂಕ್ರು ನಾಯ್ಕ ಎಂಬಾತರಾಗಿದ್ದು, ಆ ದಿನ ಕಾರಿನಲ್ಲಿದ್ದ ಗಣೇಶ ಮಂಜುನಾಥ ನಾಯ್ಕ ಹಾಗೂ ಪ್ರಕಾಶ ಸುಬ್ರಾಯ ನಾಯ್ಕ’ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.
`ಬೇರೆ ವಾಹನ ಡಿಕ್ಕಿ ಆದರೆ ಕೇಸ್ ಆಗುತ್ತದೆ ಎಂದು ಹೆದರಿಸಿದ ಕಾರಣ ಅಂದು ತಮ್ಮ ಪತಿ ತಪ್ಪು ಮಾಹಿತಿ ನೀಡಿದ್ದಾರೆ. ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದೇ ಹೀಗಾಗಿದ್ದು, ನಾನು ಹೇಳುತ್ತಿರುವುದೇ ಸತ್ಯ’ ಎಂದವರು ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾರೆ. ಈ ಅಪಘಾತದ ಕಾರಣ ವಿಷ್ಣು ನಾಯ್ಕ ಅವರ ಪಾದದ ಗಂಟಿನ ಮಾಂಸ ಕಿತ್ತು ಹೋಗಿದ್ದು, ಹಾಗೂ ಮೊಣಕಾಲಿನ ಮೂಳೆ ಮುರಿದಿದೆ. ಪ್ರಸ್ತುತ ಅವರು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





Discussion about this post