ಜುಲೈ 16ರ ಬೆಳಗ್ಗೆ 8.35ರ ಆಸುಪಾಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು (Shiruru) ಗುಡ್ಡ ಕುಸಿದು ಗಂಗಾವಳಿ ನದಿಯ ಪಾಲಾಯಿತು. ಮೊದಲ ಒಂದು ವಾರದವರೆಗೆ ಸರಿಯಾದ ಸಾವು-ನೋವಿನ ಸಂಖ್ಯೆ ಯಾರಿಗೂ ಗೊತ್ತಾಗುವ ಹಾಗಿರಲಿಲ್ಲ. ಕಾರ್ಯಾಚರಣೆ ಶುರುವಾದ ನಂತರ ಎರಡು ವಾರಗಳವರೆಗೂ ಎಲ್ಲವೂ ಗೊಂದಲಗಳಿoದಲೇ ಕೂಡಿತ್ತು. ಪ್ರಸ್ತುತ ಶಿರೂರು ಗುಡ್ಡ ಕುಸಿತವಾಗಿ ಒಂದು ತಿಂಗಳಾಗಿದ್ದು, ಈವರೆಗೆ 8 ಜನರ ಶವ ಹಾಗೂ ಲಾರಿಯ ಕೆಲ ಬಿಡಿಭಾಗಗಳು ಮಾತ್ರ ಸಿಕ್ಕಿವೆ. ಮೂವರು ಕಣ್ಮರೆಯಾದ ಬಗ್ಗೆ ಅಧಿಕೃತ ಮಾಹಿತಿ ಇದೆ. ಇದನ್ನು ಹೊರತುಪಡಿಸಿ ನದಿ ಹಾಗೂ ಮಣ್ಣಿನ ಅಡಿಯ ಅನೇಕ ಜೀವಬಿಟ್ಟ ಜೀವ ಸಂಕುಲದ ರಹಸ್ಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿ ಪಾಲಾಗಿದ್ದ ಲಾರಿಯ ಹುಡುಕಾಟ ಮುಂದುವರೆದಿದೆ. ಈವರೆಗೆ ಡ್ರೋಣ್, ಹೆಲಿಕಾಪ್ಟರ್ ಸೇರಿ ನಾನಾ ಬಗೆಯ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಎನ್ಡಿಆರ್ಎಫ್, ಭಾರತೀಯ ನೌಕಾದಳ, ಮಿಲಟರಿ ಪಡೆ ಸೇರಿ ಸಾಕಷ್ಟು ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ನೀರಿನ ಆಳದಲ್ಲಿ ಹುಡುಕಾಟ ನಡೆಸಿದ್ದು, ಕಣ್ಮರೆಯಾದ ಮೂವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಲಾರಿ ಇರುವ ಜಾಗ ಖಚಿತವಾಗಿದ್ದು, ಅದನ್ನು ಮೇಲೆತ್ತುವುದು ಸಹ ಸುಲಭವಾಗಿಲ್ಲ.
ಶುಕ್ರವಾರ ಸಹ ಈಶ್ವರ ಮಲ್ಪೆ ಸ್ಥಳದಲ್ಲಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಕೆಲ ಅವಶೇಷಗಳು ಮಾತ್ರ ಸಿಗುತ್ತಿದ್ದು, ನೀರಿನ ಒಳಗೆ ಎಲ್ಲಿ ನೋಡಿದರೂ ಭಾರೀ ಪ್ರಮಾಣದ ಮಣ್ಣು ಕಾಣುತ್ತಿದೆ. ಒಂದಷ್ಟು ಮರಗಳು ಮುರಿದುಬಿದ್ದಿದೆ. ಮರಗಳ ಅಡಿಯಲ್ಲಿ ಲಾರಿ ಇರುವ ಕಾರಣ ಅದನ್ನು ಹೊರತೆಗೆದ ನಂತರವೇ ಮುಂದಿನ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಶುಕ್ರವಾರ ಮರಗಳನ್ನು ಅಲ್ಲಿಂದ ಹೊರತೆಗೆಯುವ ಪ್ರಯತ್ನ ಸಾಗಿದೆ.
ಶುಕ್ರವಾರ ನಡೆದ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..






Discussion about this post