ಉತ್ತರ ಕನ್ನಡ ಜಿಲ್ಲೆಯಲ್ಲಿ ( Uttara kannada ) 16 ಯೋಜನೆಗಳ ಅಡಿ ಬೇರೆ ಬೇರೆ ಕಂಪನಿ ಕೆಲಸ ಮಾಡುತ್ತಿದೆ. ಆದರೆ, ಆ ಎಲ್ಲಾ ಕಂಪನಿಗಳ ಮೂಲ ಮಾಲಕರು ಒಂದೇ!
ಈ ರೋಚಕ ಸತ್ಯವನ್ನು ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ. ಜಿಲ್ಲೆಯ ರಾಜಕೀಯ ನಾಯಕರೊಬ್ಬರು ಆ ಕಂಪನಿ ಪರವಾಗಿದ್ದು, ದಾಖಲೆಗಳ ಜೊತೆ ಅವರ ಜಾತಕವನ್ನು ಬಿಚ್ಚಿಡುವೆ ಎಂದು ಸ್ವಾಮೀಜಿ ಹೇಳಿದ್ದಾರೆ.
`ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಈಡಿಗ ಸಮುದಾಯದ ಏಳು ಜನಸೇರಿ ಒಟ್ಟು 11 ಮಂದಿ ಮೃತರಾಗಿದ್ದಾರೆ. ಅವರ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದವರು ಹೇಳಿದ್ದಾರೆ. `ಎನ್ಎಚ್ಎಐ ಹಾಗೂ ಐ ಆರ್ ಬಿ ಕಂಪನಿ ಲೂಟಿಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಜತೆಗೆ ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಸಿಗಬೇಕು. ಅಲ್ಲಿಯ ವರೆಗೆ ಹೋರಾಟ ನಿಲ್ಲುವುದಿಲ್ಲ. ನ್ಯಾಯ ಸಿಗದಿದ್ದರೆ ಶಿರೂರಿನಿಂದ ಸಂಸತ್ ಭವನದವರೆಗೂ ಪಾದಯಾತ್ರೆ ಮಾಡಲು ಸಿದ್ಧ’ ಎಂದವರು ಎಚ್ಚರಿಕೆ ನೀಡಿದ್ದಾರೆ.
ಇದರೊಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗಾಗಲೇ ಅಧಿಕಾರಿಗಳು ಹಾಗೂ IRB ಕಂಪನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿರುವ ಅವರು ಇದೀಗ ಹೆದ್ದಾರಿ ಸಂಬ0ಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ ಹೈಕೋರ್ಟಿನಲ್ಲಿ ಸಹ ಅಧಿಕಾರಿಗಳ ವಿರುದ್ಧ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
`NHAI ರಸ್ತೆ ಅಗಲೀಕರಣ ಕಾಮಗಾರಿಯನ್ನು 2013ರಲ್ಲಿ IRB ಕಂಪೆನಿಗೆ ವಹಿಸಿದೆ. ಆದರೆ ಈವರೆಗೂ ಕಾಮಗಾರಿ ಮುಗಿದಿಲ್ಲ. ಆದರೆ ಕಾಮಗಾರಿ ವೇಳೆ ಒಪ್ಪಂದದ ಯಾವುದೇ ನಿಯಮಗಳನ್ನು ಗುತ್ತಿಗೆ ಕಂಪನಿ ಪಾಲಿಸಿಲ್ಲ. ಇಷ್ಟಾದರೂ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಅಗಲೀಕರಣದಿಂದ ಸಾವಿರಾರು ಜನರು ತೊಂದರೆಗೊಳಗಾಗಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಕಂಪನಿ ಸಂತ್ರಸ್ತರಿಗೆ ನೀಡಿಲ್ಲ’ ಎಂದು ಅವರು ದೂರಿದರು.





Discussion about this post