`ರಾಜ್ಯ ಸರ್ಕಾರದ ಸಹಕಾರವಿಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಕಷ್ಟ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಯಲ್ಲಾಪುರದ ಅಡಿಕೆ ಭವನದಲ್ಲಿ ಭಾನುವಾರ `ಬಿಜೆಪಿ ಸದಸ್ಯತ್ವ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು `ಮೊಬೈಲ್ ಟವರ್ ನಿರ್ಮಾಣ, ಹೆದ್ದಾರಿ ಸಮಸ್ಯೆ ಸೇರಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಈ ಬಗ್ಗೆ ಎಷ್ಟು ಬಾರಿ ತಿಳಿಸಿದರೂ ರಾಜ್ಯ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಕಾಂಗ್ರೆಸ್ ಆಡಳಿತ ಅಭಿವೃದ್ಧಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
`ಸನಾತನ ಧರ್ಮ ಉಳಿಸಲು ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷದಿಂದ ಅಸಾಧ್ಯ. ಸನಾತನ ಹಿಂದೂ ಧರ್ಮದ ಸಂಗತಿಗಳನ್ನು ಕಾಪಾಡಲು ಬಿಜೆಪಿ ಅನಿವಾರ್ಯವಾಗಿದೆ. ಬಿಜೆಪಿ ವಿಶಿಷ್ಠ ಪದ್ಧತಿ, ತತ್ವ-ಸಿದ್ಧಾಂತವನ್ನು ಹೊಂದಿದ್ದು ಪಕ್ಷದ ಕಾರ್ಯಕರ್ತರು ಸದಸ್ಯತ್ವ ಅಭಿಯಾನದ ಮೂಲಕ ಅದನ್ನು ಮನೆ ಮನೆಗೆ ತಲುಪಿಸಬೇಕು’ ಎಂದು ಕರೆ ನೀಡಿದರು.
`ನೆಹರು ಕಾಲದಿಂದಲೂ ವಿದೇಶಿ ಮಾದರಿಯ ಆಡಳಿತ ಭಾರತದ ಮೇಲೆ ಪ್ರಭಾವ ಬಿದ್ದಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಹ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಭಾರತವನ್ನು ಜಗತ್ತಿನ ಮಂಚೂಣಿ ದೇಶವನ್ನಾಗಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಜವಾಬ್ದಾರಿವಹಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
`ಹಳ್ಳಿ ಹಳ್ಳಿಯಲ್ಲಿಯೂ ಮೊಬೈಲ್ ನೆಟ್ವರ್ಕ ಸಿಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 200 ಟವರ್ ಮಂಜೂರಿಯಾಗಿದೆ. ಅದಕ್ಕೆ ಬೇಕಾದ ಸೌಕರ್ಯ ಒದಗಿಸಲಾಗಿದ್ದು, ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ. ಡಿಸೆಂಬರ್ ಅಂತ್ಯದ ಒಳಗೆ 50 ಟವರ್ ಉದ್ಘಾಟಿಸುವ ಗುರಿಯಿದೆ’ ಎಂದರು.
ಪ್ರಮುಖರಾದ ರೇಖಾ ಭಟ್ಟ, ಉಮೇಶ ಭಾಗ್ವತ್, ಹರಿಪ್ರಕಾಶ ಕೋಣೆಮನೆ, ಪ್ರಮೋದ ಹೆಗಡೆ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಶಿವಲಿಂಗಯ್ಯ ಅಲ್ಲಯ್ಯನಮಠ, ಶಿವಾಜಿ ನರಸಾನಿ, ಗಣಪತಿ ಮಾನಿಗದ್ದೆ, ಪ್ರೇಮಕುಮಾರ, ಗೋಪಾಲಕೃಷ್ಣ ಗಾಂವ್ಕರ್, ಸುಧಾಕರ ರೆಡ್ಡಿ, ಶೃತಿ ಹೆಗಡೆ, ಶಾಂತಾರಾಮ ಸಿದ್ದಿ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ಸ್ವಾಗತಿಸಿದರು. ಪಕ್ಷದ ಪ್ರಮುಖ ರವಿ ಕೈಟ್ಕರ್ ನಿರೂಪಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.




