ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದ ಲೋಕಾಯುಕ್ತರು ಶುಕ್ರವಾರ ಯಲ್ಲಾಪುರದ ಕಲ್ಮಠಕ್ಕೆ ಆಗಮಿಸಿ ಅಲ್ಲಿನ ಕೃಷಿಭೂಮಿ, ಲೇಔಟ್ ಹಾಗೂ ರಸ್ತೆ ಮಾರ್ಗಗಳ ಅಳತೆ ಪಡೆದರು!
ನಕ್ಷೆಗೆ ವ್ಯತಿರಿಕ್ತವಾಗಿ ಲೇಔಟ್ ನಿರ್ಮಿಸಿ ಕೃಷಿಭೂಮಿ ಮಾಲಕರಿಗೆ ಅನ್ಯಾಯ ಮಾಡಿದ ಕುರಿತು ದಾಖಲಾದ ದೂರಿಗೆ ಸಂಬoಧಿಸಿ ಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸಿದರು. `ಲೇಔಟ್ ನಿರ್ಮಾಣಕ್ಕೆ ಪಡೆದ ಅನುಮೋದನೆ ಹೊರತುಪಡಿಸಿ ನಮ್ಮ ಕೃಷಿಭೂಮಿ ಅತಿಕ್ರಮಣ ನಡೆದಿದೆ. ನಮ್ಮ ಕೃಷಿಭೂಮಿಯಲ್ಲಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡು ರಸ್ತೆಯನ್ನು ನಿರ್ಮಿಸಲಾಗಿದೆ’ ಎಂದು ಕಲ್ಮಠದ ಮಲ್ಲಯ್ಯ ಚನ್ನಯ್ಯ ಹಿರೇಮಠ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. `ಖಾಸಗಿಯವರ ಕುಮ್ಮಕ್ಕಿನಿಂದ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಇದರಿಂದ ತಮಗೆ ನಷ್ಟವಾಗಿದೆ’ ಎಂದು ಮಲ್ಲಯ್ಯ ಹಿರೇಮಠ ಅಳಲು ತೋಡಿಕೊಂಡರು. ಲೇಔಟ್’ನಲ್ಲಿ ಸೈಟ್ ಖರೀದಿಸಿದವರಿಗೆ ನಿಯಮಾನುಸಾರ ನಾಗರಿಕ ಸೌಲಭ್ಯವನ್ನು ನೀಡದ ಬಗ್ಗೆ ಅವರು ಆರೋಪಿಸಿದ್ದರು.
ಕೃಷಿಭೂಮಿ ಅತಿಕ್ರಮಣ ಹಾಗೂ ಸರ್ಕಾರಿ ಹಣ ದುರುಪಯೋಗ ವಿಷಯವಾಗಿ ವಿಚಾರಣೆ ನಡೆಸಿದ ಲೋಕಾಯುಕ್ತರು ದೂರುದಾರರ ಬೇಡಿಕೆಯಂತೆ ಸ್ಥಳ ಪರಿಶೀಲನೆ ನಡೆಸಿ ಭೂಮಿಯ ಅಳತೆ ಪಡೆದರು. ದೂರುದಾರರು ತಿಳಿಸಿದ ಕೃಷಿಭೂಮಿ, ರಸ್ತೆ ಅತಿಕ್ರಮಣ, ಭೂ ಪರಿವರ್ತನೆಯ ಪ್ರದೇಶ ಹಾಗೂ ದಾಖಲೆಗಳಲ್ಲಿ ಮಾತ್ರ ನಾಗರಿಕ ಸೌಲಭ್ಯ ನಮೂದಿಸಿದ ಅಂಶವನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿ ಅದನ್ನು ದಾಖಲಿಸಿಕೊಂಡರು.




