ಗೋಕರ್ಣದಲ್ಲಿ ಪ್ರಸಾದ ರೂಪದಲ್ಲಿ ವಿತರಿಸುವ ಲಡ್ಡು ಸಂಪೂರ್ಣ ಸುರಕ್ಷಿತ. ಹೀಗಾಗಿ ಅಪಾರ ಭಕ್ತರು ಇಲ್ಲಿನ ಲಡ್ಡು ಸ್ವೀಕರಿಸುತ್ತಿದ್ದು, ಇದರಿಂದಲೇ ದೇವಾಲಯಕ್ಕೆ ನಿತ್ಯ ಸುಮಾರು 15ರಿಂದ 20 ಸಾವಿರ ರೂ ಆದಾಯ ಬರುತ್ತಿದೆ!
ತಿರುಪತಿ ಲಡ್ಡು ಕಳಂಕದ ಬಗ್ಗೆ ಚರ್ಚೆ ಹುಟ್ಟಿದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯ ಯಾವ ದೇವಾಲಯದಲ್ಲಿ ಯಾವ ಬಗೆಯ ಪ್ರಸಾದ ವಿತರಣೆ ನಡೆದಿದೆ? ಎಂಬ ಬಗ್ಗೆ ಜನ ಚರ್ಚಿಸುತ್ತಿದ್ದಾರೆ. ಈ ಪೈಕಿ ಗೋಕರ್ಣದಲ್ಲಿ ಕಳೆದ ಒಂದು ದಶಕದಿಂದ ಲಡ್ಡು ವಿತರಣೆ ನಡೆದಿದ್ದು ಇಲ್ಲಿ ರಮೇಶ ಭಟ್ಟ ನೇತ್ರತ್ವದಲ್ಲಿ ಅವರ ತಂಡದವರು ಲಡ್ಡು ತಯಾರಿಸುತ್ತಾರೆ. ದೇವಾಲಯದಿಂದ ಸುಮಾರು 30 ಮೀ ದೂರದಲ್ಲಿರುವ ಅಮೃತಾನ ಬೋಜನ ಶಾಲೆಯಲ್ಲಿಯೇ ಲಡ್ಡು ತಯಾರಿಕೆ ನಡೆಯುತ್ತಿದೆ. ಇದೇ ಜಾಗದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಸಹ ನಡೆಯುವುದರಿಂದ ನಿತ್ಯ ಮೂರು ಬಾರಿ ಆ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತದೆ.
ಇನ್ನೂ ಲಡ್ಡು ತಯಾರಿಕೆಗೆ ಕೊಬ್ಬರಿ ಅಥವಾ ಸನ್ಪ್ಲವರ್ ಎಣ್ಣೆ ಬಳಸಲಾಗುತ್ತದೆ. ಕಡ್ಲೆಹಿಟ್ಟು-ಸಕ್ಕರೆ ಜೊತೆ ಲವಂಗ, ದ್ರಾಕ್ಷಿ-ಗೋಡಂಬಿಯನ್ನು ಬಳಸಿ ಗುಣಮಟ್ಟದ ಲಡ್ಡು ತಯಾರಿಸಲಾಗುತ್ತಿದೆ. ರಮೇಶ ಭಟ್ಟ ಅವರ ಜೊತೆಗಿರುವ ಆರು ಸಿಬ್ಬಂದಿ ಸಹ ಈ ಲಡ್ಡು ತಯಾರಿಸುವ ಕೆಲಸದಲ್ಲಿ ಭಾಗಿಯಾಗುತ್ತಾರೆ. ಹೀಗೆ ತಯಾರಿಸಲಾದ ಲಡ್ಡುವನ್ನು ದೇವರಿಗೆ ನೈವೇದ್ಯ ಮಾಡಿದ ನಂತರ ಭಕ್ತರಿಗೆ ವಿತರಿಸಲಾಗುತ್ತದೆ. ತಲಾ 20 ರೂಪಾಯಿ ರೂ ಪಾವತಿಸಿ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ.




