ಯಲ್ಲಾಪುರ: ಬ್ರಿಟಿಷರ ಕಾಲದಿಂದಲೂ ತೋಟಿಗರ ಬಳಕೆಗೆ ನೀಡಲಾದ ಸೊಪ್ಪಿನ ಬೆಟ್ಟ ವಿಷಯದಲ್ಲಿ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಯಲ್ಲಾಪುರದ ರೈತರು ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಲು ತಯಾರಿ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ 11ಕ್ಕೆ ಡಿಎಫ್ಓ ಕಚೇರಿ ಬಳಿ ಎಲ್ಲಾ ರೈತರು ಸೇರಿ ಮೊದಲ ಹಂತವಾಗಿ `ನಮ್ಮ ಹಕ್ಕುಗಳನ್ನು ನಮಗೆ ಕೊಡಿ’ ಎಂದು ಮನವಿ ಸಲ್ಲಿಸಲಿದ್ದಾರೆ. ಅಲ್ಲಿಯೂ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಮುಂದಿನ ಹೋರಾಟ ಬಗ್ಗೆಯೂ ನಿರ್ಣಯ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಸೋಮವಾರ ನ್ಯಾಯವಾದಿ ಆರ್ ಕೆ ಭಟ್ಟ ವಿಡಿಯೋ ಹರಿಬಿಟ್ಟಿದ್ದಾರೆ.
ಸ್ವತಃ ಆರ್ ಕೆ ಭಟ್ಟರು ಬಿಸಗೋಡಿನ ಸೊಪ್ಪಿನ ಬೆಟ್ಟಕ್ಕೆ ತೆರಳುವಾಗ ಅಲ್ಲಿನ ಅರಣ್ಯ ಸಿಬ್ಬಂದಿ ಅಡ್ಡಿ ಮಾಡಿದ ಬಗ್ಗೆ ವಿವರಿಸಿದ್ದಾರೆ. ಸೊಪ್ಪಿನ ಬೆಟ್ಟದ ಸಮಸ್ಯೆ ಅನುಭವಿಸುತ್ತಿರುವ ಎಲ್ಲಾ ರೈತರು ಈ ಹೋರಾಟದಲ್ಲಿ ಭಾಗಿಯಾಗಿ ಎಂದು ಅವರು ಕರೆ ನೀಡಿದ್ದಾರೆ.




