ಯಲ್ಲಾಪುರ: `ವಿದೇಶಿ ಅಡಿಕೆ ಆಮದು ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರ ಎಡವುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಮನವರಿಕೆ ಮಾಡುತ್ತಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಹಾಗೂ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಕೇಂದ್ರ ಸರ್ಕಾರ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದರು.
`ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೋಟ್ಯಂತರ ಜನ ಜೀವನ ಅಸ್ತವ್ಯಸ್ಥವಾಗಲಿದೆ. ಮನೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸಗಳಿಗೆ ಈ ಯೋಜನೆ ಮಾರಕವಾಗಿದೆ. ಈ ಬಗ್ಗೆ ಅರಿವಿದ್ದರೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಪೂರಕ ಅಭಿಪ್ರಾಯ ಸಲ್ಲಿಸುವಂತೆ ಒತ್ತಡ ತರುತ್ತಿದೆ. ಇದನ್ನು ವಿರೋಧಿಸಬೇಕಾದ ಸಂಸದರು ಸಹ ಮೌನವಾಗಿದ್ದಾರೆ’ ಎಂದು ದೂರಿದರು.
`ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಹೊರ ರಾಜ್ಯದ ಅಡಿಕೆ ಆಮದಿಗೆ ಅನುಮತಿ ನೀಡಿದ್ದರಿಂದ ಇಲ್ಲಿನ ಅಡಿಕೆಗೆ ಬೆಲೆ ಸಿಗುತ್ತಿಲ್ಲ. ಜೊತೆಗೆ ಬೇರೆ ದೇಶದ ಅಡಿಕೆ ಸ್ಥಳೀಯ ಅಡಿಕೆ ಜೊತೆ ಕಲಬೆರಕೆಯಾಗುವುದುರಿಂದ ಗುಣಮಟ್ಟದ ಅಡಿಕೆ ಬೆಳೆಗಾರರಿಗೂ ಸಮಸ್ಯೆಯಾಗಿದೆ’ ಎಂದು ವಿವರಿಸಿದರು.
ಕಾಂಗ್ರೆಸ್ ಪ್ರಮುಖರಾದ ಡಾ ರವಿ ಭಟ್ಟ ಬರಗದ್ದೆ, ಉಲ್ಲಾಸ ಶಾನಭಾಗ, ವಿ ಎಸ್ ಭಟ್ಟ ಉಪಳೇಶ್ವರ, ಪ್ರೇಮಾನಂದ ನಾಯ್ಕ, ಪ್ರಶಾಂತ ಸಭಾಹಿತ ಇತರರು ಇದ್ದರು.




