ಹಳಿಯಾಳ: ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಟ್ಟಣದಲ್ಲಿರುವ ಶಾಸಕರ ಮಾದರಿ ಶಾಲೆಯು ಜಲಾವೃತಗೊಂಡಿದೆ. ಅದೇ ರೀತಿ ಆನೆಗುಂದಿ ಬಡಾವಣೆ, ಅರ್ಬನ್ ಸರ್ಕಲ್, ಸದಾಶಿವನಗರ ಮೊದಲಾದ ಕಡೆಗಳಲ್ಲಿ ಮಳೆಯಿಂದಾಗಿ ತೀವ್ರ ತೊಂದರೆಯಾಗಿದೆ. ಏಕಾಏಕಿ ಸುರಿದ ಭೀಕರ ಮಳೆಗೆ ಮಳೆ ನೀರು ಹಾಗೂ ಗಟಾರದ ನೀರು ಹಲವೆಡೆ ಮನೆಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಎಪಿಎಂಸಿ ಯಾರ್ಡ್, ರಸ್ತೆಯ ಒಣಗಿಸಲು ಹಾಕಿದ್ದ ಗೋವಿನ ಜೋಳ ಮಳೆಯ ನೀರಿಗೆ ಕೊಚ್ಚಿ ಹೋಗಿದೆ.
ಸರ್ಕಾರಿ ಜಮೀನು ಉಳಿಸಲು ಕಂದಾಯ ಆಯುಕ್ತರ ಸೂಚನೆ
ಕಾರವಾರ: `ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವುದು ಸರ್ಕಾರದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೆ ಶೇ.75ರಷ್ಟು ಪ್ರಗತಿಯಾಗಿದೆ. ಈ ಯೋಜನೆಯಲ್ಲಿ ಶೇ.100 ಪ್ರಗತಿ ಸಾಧಿಸಲು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು’ ಎಂದು ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚಿಸಿದರು.
ಅವರು ಮಂಗಳವಾರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ 21,24,728 ಆರ್.ಟಿ.ಸಿ ಗಳಿಗೆ ಆಧಾರ್ ಜೋಡಣೆ ಕಾರ್ಯ ಮಾಡಬೇಕಿದ್ದು, ಇದುವರೆಗೆ 11,69,620 ಆರ್.ಟಿ.ಸಿಗಳಿಗೆ ಆಧಾರ್ ನೋಂದಣಿಯಾಗಿದೆ. ಮೂಲ ಪಹಣಿದಾರರು ಮರಣ ಹೊಂದಿದ್ದರೆ ಅವರ ವಾರಿಸುದಾರರಿಗೆ ಮಾಲೀಕತ್ವವನ್ನು ವರ್ಗಾಯಿಸುವ ಕುರಿತಂತೆ ಕ್ರಮ ಜರುಗಿಸಿ’ ಎಂದು ಸೂಚಿಸಿದರು. `ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ಸಂರಕ್ಷಿಸುವ ಲ್ಯಾಂಡ್ ಬೀಟ್ ಯೋಜನೆಯಡಿ ಎಲ್ಲಾ ಸರ್ಕಾರಿ ಜಮೀನುಗಳನ್ನು ಸರ್ವೇ ಮಾಡಿ ಅವುಗಳನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತಹಶೀಲ್ದಾರ್ಗಳು ಆದ್ಯತೆಯಲ್ಲಿ ಕೈಗೊಳ್ಳಬೇಕು’ ಎಂದರು.
ಸಚಿವರಿಗೆ ದೂರು: ಕಂದಾಯ ಕಚೇರಿಯಲ್ಲಿ ಅಧಿಕಾರಿಗಳ ದರ್ಬಾರ್!

ಭಟ್ಕಳ: ಒಂದು ದಶಕದಿಂದ ಭಟ್ಕಳದಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಹೋರಾಟಗಾರರು ಸಮಸ್ಯೆಗಳ ಬಗ್ಗೆ ವಿವರಿಸಿದರು. `ಭಟ್ಕಳದ ಸಹಾಯಕ ಕಮಿಷನರ್ ಕಚೇರಿ ಹಾಗೂತಹಶೀಲ್ದಾರ ಕಚೇರಿಯಲ್ಲಿ ನಿಯಮಬಾಹೀರವಾಗಿ ಹಲವು ವರ್ಷದಿಂದ ಸರ್ಕಾರಿ ನೌಕರರು ಬೀಡುಬಿಟ್ಟಿದ್ದಾರೆ’ ಎಂದು ದೂರಿದರು.
ಪ್ರೌಢಶಾಲಾ ಮಕ್ಕಳ ಕ್ರೀಡಾ ಸಾಧನೆ

ಹೊನ್ನಾವರ: ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆ ವಿದ್ಯಾರ್ಥಿಗಳು ರನ್ನರ್ ಅಫ್ ಸ್ಥಾನ ಪಡೆದಿದ್ದಾರೆ.
ಕುಮಟಾ ಹಲವು ಕಡೆ ನಾಳೆ ಕರೆಂಟ್ ಇರಲ್ಲ
ಕುಮಟಾ: 33/11 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವದರಿಂದ ಗೋಕರ್ಣ ವ್ಯಾಪ್ತಿಯ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬಿಚ್ ಫೀಡರಿನ ಎಲ್ಲಾ ಭಾಗಗಳಲ್ಲ್ಲಿ ಸೆ 25ರಂದು 10ಗಂಟೆಯಿAದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಜೊತೆಗೆ ಮರಾಕಲ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಹೊದ್ಕೆ ಶಿರೂರು ಹಾಗೂ ಮೂರುರು ಫೀಡರಿನ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಶಾಖೆಯ ಕತಗಾಲ, ಮಿರ್ಜಾನ್, 11 ಕೆ.ವಿ ಮಾರ್ಗದಲ್ಲಿ ಜಂಗಲ್ ಕಟ್ಟಿಂಗ್ ಮತ್ತು ನಗರ ಶಾಖೆಯ ಫೀಡರಗಳಾದ ಕುಮಟಾ ನಗರ, ಮತ್ತು ಚಿತ್ರಗಿ ಭಾಗಗಳಲ್ಲಿ ಜಂಗಲ್ ಕಟ್ಟಿಂಗ್ ಇರುವುದರಿಂದ ಸೆ.25ರಂದು ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಸಂಸ್ಕಾರ-ಸ0ಸ್ಕೃತಿ ಉಳಿವಿಕೆಗೆ ಶ್ರೀಗಳ ಕರೆ

ದಾಂಡೇಲಿ: ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ದಾಂಡೇಲಿಗೆ ಭೇಟಿ ನೀಡಿದ್ದು, ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿದರು. ನಂತರ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿದ ಪೂಜ್ಯರು ಅಲ್ಲಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆದುಕೊಂಡರು.
`ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಅನಾದಿ ಕಾಲದಿಂದ ಬಂದ ಸಂಸ್ಕಾರ, ಸಂಸ್ಕೃತಿ ಮಾಯವಾಗುತ್ತಿದೆ. ಇಂದಿನ ಪೀಳಿಗೆಯ ಜೀವನ ಶೈಲಿ ಬದಲಾಗಿದೆ. ಆರ್ಥಿಕ, ಶೈಕ್ಷಣಿಕ ಪ್ರಗತಿಯ ಜೊತೆಗೆ ಧರ್ಮ ಜಾಗೃತಿ ಮತ್ತು ನಮ್ಮ ಅನಾದಿಕಾಲದ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು’ ಎಂದು ಅವರು ಕರೆ ನೀಡಿದರು.
ಸ್ಕೊಡ್ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

ಶಿರಸಿ: `ಮಹಿಳೆಯರು ಸುಶಿಕ್ಷಿತರಾಗಿ, ಆರ್ಥಿಕವಾಗಿ ಸದೃಢರಾದಾಗ ಆ ಕುಟುಂಬ, ಸಮಾಜದ ಉನ್ನತಿ ಸಾಧ್ಯವಾಗುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ನೆಮ್ಮದಿ ರಂಗಧಾಮದಲ್ಲಿ ಸ್ಕೊಡ್ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶ, ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಹಲವು ಸಂಸ್ಥೆಗಳ ಕಾರಣದಿಂದ ಮಹಿಳೆಯರು ಸಂಘಗಳ ಚಟುವಟಿಕೆಯಲ್ಲಿ ಹೆಚ್ಚೆಚ್ಚು ತೊಡಗಿದ್ದಾರೆ. ಇದರಿಂದ ಮಹಿಳೆಯರು ಸಾಕಷ್ಟು ಜಾಗೃತರಾಗಿದ್ದಾರೆ. ಶ್ರಮಿಕ ಮಹಿಳೆಯರು ಸೇರಿ ತಮಗಾಗಿ ಕಟ್ಟಿಕೊಂಡ ಸ್ಕೊಡವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಆಗಿರುವುದು ಶ್ಲಾಘನೀಯ’ ಎಂದರು.




