ಯಲ್ಲಾಪುರ: 2010ರ ಅವಧಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯನಾಗಿ ಆಯ್ಕೆಯಾಗಿದ್ದ ವೇಳೆ ಲಂಚ ಸ್ವೀಕರಿಸಿದ್ದ ರವಿ ಸೋಮಯ್ಯ ದೇವಾಡಿಗ ಎಂಬಾತರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 14 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.
ನಾಯ್ಕನಕೆರೆ ವಾರ್ಡನ್ನು ಪ್ರತಿನಿಧಿಸುತ್ತಿದ್ದ ರವಿ ದೇವಾಡಿಗ ತಟಗಾರ ರಸ್ತೆಯ ನರಸಿಂಹ ವೆಂಕಟ್ರಮಣ ಭಟ್ಟ ಅವರಿಂದ 10 ಸಾವಿರ ರೂ ಲಂಚ ಬೇಡಿದ್ದ. ನರಸಿಂಹ ಭಟ್ಟರ ಮನೆ ಎದುರು ಪಟ್ಟಣ ಪಂಚಾಯತ ಚರಂಡಿ ನಿರ್ಮಾಣವಾಗುತ್ತಿದ್ದು, ಮೊದಲು `ಆ ಚರಂಡಿ ನಿರ್ಮಾಣಕ್ಕಾಗಿ ನಿಮ್ಮ ಮನೆ ಗೋಡೆ ಒಡೆಯಬೇಕು’ ಎಂದು ಗುತ್ತಿಗೆದಾರರ ಮೂಲಕ ಹೆದರಿಸಿದ್ದ. ನಂತರ ಮನೆ ಗೋಡೆ ಒಡೆಯದೇ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಗೆ 5 ಸಾವಿರ ರೂಪಾಯಿಗೆ ಮಾತುಕಥೆ ನಡೆದಿದ್ದು, ಕೂಡಲೇ ಹಣ ಬೇಕು ಎಂದು ರವಿ ದೇವಾಡಿಗ 500ರೂ ಪಡೆದಿದ್ದ. ಉಳಿದ 4500ರೂ ಎರಡು ದಿನದಲ್ಲಿ ಕೊಡಬೇಕು ಎಂದು ತಾಕೀತು ಮಾಡಿದ್ದ. ಈ ಬಗ್ಗೆ ನರಸಿಂಹ ಭಟ್ಟರು ಲೋಕಾಯುಕ್ತ ದೂರು ನೀಡಿದ್ದರು.
ಪೂರ್ವನಿಯೋಜಿತ ರೂಪುರೇಷೆಯಂತೆ ಹಣ ಪಡೆಯುವಾಗ ಪ ಪಂ ಸದಸ್ಯ ರವಿ ದೇವಾಡಿಗ ಲೋಕಾಯುಕ್ತರ ಬಳಿ ಸಿಕ್ಕಿ ಬಿದ್ದಿದ್ದು, ತನಿಖೆ ನಡೆಯುತ್ತಿತ್ತು. ಪ್ರಸ್ತುತ ಜಿಲ್ಲಾ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ರವಿ ದೇವಾಡಿಗನನ್ನು ಜೈಲಿಗೆ ಕಳುಹಿಸಿದ್ದಾರೆ. ಜೊತೆಗೆ 10 ಸಾವಿರ ರೂ ದಂಡ ವಿಧಿಸಿ, ದೂರುದಾರನಿಗೆ ಪರಿಹಾರವನ್ನು ಒದಗಿಸಿದ್ದಾರೆ.




