ಯಲ್ಲಾಪುರ: ಕಾಂಗ್ರೆಸ್ ಬೆಂಬಲಿತ ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಬಿಜೆಪಿ ಬೆಂಬಲಿತ ಸದಸ್ಯರ ವಾರ್ಡುಗಳಿಗೆ ಅಭಿವೃದ್ಧಿಗೆ ಹೆಚ್ಚುವರಿ ಹಣ ಮಂಜೂರಿ ನೀಡಿದ್ದು, ಈ ವಿಷಯವಾಗಿ ಪಟ್ಟಣ ಪಂಚಾಯತ ಸಭೆಯಲ್ಲಿ ವ್ಯಾಪಕ ವಾಗ್ವಾದ ನಡೆಯಿತು. ತಳ್ಳಿಗೇರಿ ಹಾಗೂ ಕೋರ್ಟವಾಡದ ಜನರ ಮನವಿ ಮೇರೆಗೆ ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಆ ಭಾಗದ ಗಟಾರ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 8 ಲಕ್ಷ ರೂ ನೀಡಿದ್ದರು. ತಮ್ಮ ಗಮನಕ್ಕೆ ತಾರದೇ ಹಣ ನೀಡಿದ ಬಗ್ಗೆ ಆ ಭಾಗದ ಬಿಜೆಪಿ ಬೆಂಬಲಿತ ಸದಸ್ಯರು ಆಕ್ಷೇಪಿಸಿದರು.
`ನಮ್ಮ ವಾರ್ಡಿನ ಕಾಮಗಾರಿಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡುವುದು ಬೇಡ’ ಎಂದು ಬಿಜೆಪಿ ಬೆಂಬಲಿತ ಸದಸ್ಯೆ ಕಲ್ಪನಾ ನಾಯ್ಕ ಆಕ್ಷೇಪಿಸಿದರು. `ಅಗತ್ಯವಿರುವ ಕಡೆ ಅನುದಾನ ನೀಡದೇ ಅಗತ್ಯವಿಲ್ಲದ ಕೆಲಸಗಳಿಗೆ ಹಣ ಮಂಜೂರಿ ನೀಡಲಾಗಿದೆ’ ಎಂದು ಅವರು ದೂರಿದರು. ಬಿಜೆಪಿ ಬೆಂಬಲಿತ ಸದಸ್ಯೆ ಶ್ಯಾಮಲಿ ಪಾಠಣಕರ್ ಸಹ ಕಲ್ಪನಾ ನಾಯ್ಕ ಅವರ ಮಾತಿಗೆ ಧ್ವನಿಗೂಡಿಸಿದ್ದು `ಕಾಳಮ್ಮನಗರ ಭಾಗವಾದ ಕೋರ್ಟವಾಡದಲ್ಲಿ ಅಧ್ಯಕ್ಷರ ಬಳಿ ನಾನೇ ಮನವಿ ಮಾಡಿ ಹೆಚ್ಚುವರಿ ಹಣ ಹಾಕಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. “ಕಾಳಮ್ಮನಗರ ವಾರ್ಡಿನ ಅಮಿತ್ ಅಂಗಡಿ ಅವರು ಈ ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಹೆಚ್ಚುವರಿ ಹಣ ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ’ ಎಂದು ಶ್ಯಾಮಲಿ ಪಾಠಣಕರ್ ತಿಳಿಸಿದರು. ಆಗ `ಆ ವಾರ್ಡಿನ ಅಭಿವೃದ್ಧಿಗೆ ನೀಡಿದ ಹೆಚ್ಚುವರಿ ಹಣ ಅವರಿಗೆ ಬೇಡ ಎಂದಾದರೆ ಅದನ್ನು ನಮಗೆ ನೀಡಿ’ ಎಂದು ಮಂಜುನಾಥ ನಗರದ ಸದಸ್ಯ ಸತೀಶ್ ನಾಯ್ಕ ಪಟ್ಟುಹಿಡಿದರು. ಈ ವೇಳೆ ಬಿಜೆಪಿ ಬೆಂಬಲಿತ ಸದಸ್ಯ ಸೋಮು ನಾಯ್ಕ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಸತೀಶ್ ನಾಯ್ಕ ನಡುವೆ ಮಾತಿಗೆ ಮಾತು ಬೆಳೆದಿದ್ದು ತೀವೃ ಪ್ರಮಾಣದಲ್ಲಿ ವಾಗ್ವಾದ ನಡೆಯಿತು.
`ಬಿಜೆಪಿ ಬೆಂಬಲಿತ ಸದಸ್ಯರಿರುವ ತಳ್ಳಿಗೇರಿ ವಾರ್ಡಿನ ಗಟಾರ ನಿರ್ಮಾಣಕ್ಕೆ 3 ಲಕ್ಷ ರೂ ಹಾಗೂ ಕೋರ್ಟವಾಡಕ್ಕೆ 5 ಲಕ್ಷ ರೂ ಸೇರಿ 8 ಲಕ್ಷ ರೂ ಹೆಚ್ಚುವರಿ ನೀಡಲಾಗಿದೆ. ವೈಯಕ್ತಿಕ ದ್ವೇಷ ಹಾಗೂ ವೈಯಕ್ತಿಕ ವರ್ಚಸ್ಸಿನ ಕಾರಣ ಅಭಿವೃದ್ಧಿ ವಿಷಯದಲ್ಲಿ ವಿರೋಧ ವ್ಯಕ್ತವಾಗಿದ್ದು, ಯಾವ ವಾರ್ಡಿಗೆ ಅನುದಾನ ಬೇಡವೋ ಅದನ್ನು ಮಂಜುನಾಥ ನಗರಕ್ಕೆ ನೀಡಬೇಕು’ ಎಂದು ಸತೀಶ್ ನಾಯ್ಕ ಮತ್ತೊಮ್ಮೆ ಸಭೆಯಲ್ಲಿ ಒತ್ತಾಯಿಸಿದರು. ಅಂತಿಮವಾಗಿ ಅಧ್ಯಕ್ಷರ ವಿವೇಚನೆಗೆ ತಕ್ಕಂತೆ ಜನರ ಸಮಸ್ಯೆ ಅರಿತು ಅವರು ಅಭಿವೃದ್ಧಿಗೆ ಹಣ ನೀಡುವ ಬಗ್ಗೆ ಸಭೆಯಲ್ಲಿದ್ದವರು ಒಪ್ಪಿಗೆ ನೀಡಿದರು.
ಪಟ್ಟಣ ಪಂಚಾಯತ ಸಭೆಯಲ್ಲಿ ಸತೀಶ ನಾಯ್ಕ ಹಾಗೂ ಸೋಮು ನಾಯ್ಕ ನಡುವೆ ನಡೆದ ವಾಗ್ವಾದದ ವಿಡಿಯೋ ಇಲ್ಲಿ ನೋಡಿ..




