ಮುಂಡಗೋಡ: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಭಾಗವಹಿಸಿದ್ದ ಮುಂಡಗೋಡಿನ ಹುನಗುಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಮರ್ಥ ನಾಗರಾಜ ಅರ್ಕಸಾಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ, ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ, ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿಯವರ ಪ್ರಯೋಗಗಳು, ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಸ್ವರಾಜ್, ಆರ್ಥಿಕ ಚಿಂತನೆಗಳು, ಸತ್ಯದ ಪರಿಕಲ್ಪನೆ ಮತ್ತಿತರ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು. ಪ್ರೌಢಶಾಲೆ ವಿಭಾಗದಲ್ಲಿ 1,24,392 ವಿದ್ಯಾರ್ಥಿಗಳು, ಪಿಯುಸಿ ವಿಭಾಗದಲ್ಲಿ 12,840 ವಿದ್ಯಾರ್ಥಿಗಳು, ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 17,062 ವಿದ್ಯಾರ್ಥಿಗಳು ಸೇರಿ ಒಟ್ಟು 1,54,294 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.




