ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ ಹಾಳಾಗಿದೆ. ಹಬ್ಬುವಾಡದಿಂದ ಮುಂದೆ ಸಂಚರಿಸಿದಾಗ ಸಂಪೂರ್ಣವಾಗಿ ಹೊಂಡಗಳೇ ಕಾಣಿಸುತ್ತಿದೆ. ಇದರಿಂದ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕೆಲ ವರ್ಷದ ಹಿಂದೆ ಕೋಟಿ ಲೆಕ್ಕಾಚಾರದಲ್ಲಿ ಹಣ ವೆಚ್ಚ ಮಾಡಿ ಈ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಗುಣಮಟ್ಟದ ಕಾಮಗಾರಿ ನಡೆಸದ ಕಾರಣ ರಸ್ತೆ ರಿಪೇರಿ ಆಗಿಲ್ಲ ಎಂಬುದು ಜನರ ದೂರು. ರಾತ್ರಿ ವೇಳೆ ಸಂಚರಿಸುವಾಗ ರಸ್ತೆ ಹೊಂಡದ ಕಾರಣ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆ ಈ ರಸ್ತೆ ಹೊಣೆ ಹೊತ್ತಿದ್ದು ಕೂಡಲೇ ದುರಸ್ತಿ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನರೇಂದ್ರ ತಳೇಕರ ಹಾಗೂ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.




