ಕಾರವಾರ: ಬಹುತೇಕ ಕೃಷಿ ಭೂಮಿಗಳು ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿದ್ದು, ದಾಖಲೆಗಳಲ್ಲಿ ಮಾತ್ರ ಕೃಷಿ ಭೂಮಿ ಎಂದೇ ನಮೂದಾಗಿದೆ. ಪಹಣಿ ಪತ್ರಿಕೆ ವೇಳೆ ಆಧಾರ್ ಲಿಂಕ್ ಮಾಡುವ ವೇಳೆ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಸ್ವತ: ಕಂದಾಯ ಸಚಿವ ಕೃಷ್ಣ ಬೈರೆಗೌಡ ಈ ಮಾಹಿತಿ ಬಹಿರಂಗಪಡಿಸಿದರು.
ರಾಜ್ಯದಲ್ಲಿ ಶೇ 85ರಷ್ಟು ಕೃಷಿಭೂಮಿ ಪಹಣಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಆಧಾರ್ ಲಿಂಕ್ ಆಗದ ಪ್ರದೇಶಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಕೃಷಿ ಭೂಮಿಗಳು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಬಹುತೇಕ ಕೃಷಿ ಭೂಮಿಗಳು ಅನಧಿಕೃತ ವಸತಿ ನಿವೇಶನ ಹಾಗೂ ಸಣ್ಣಪುಟ್ಟ ಕೈಗಾರಿಕೆಗಳಿಂದ ತುಂಬಿಕೊ0ಡಿದೆ.
ಸತ್ತವರ ಹೆಸರಿನಲ್ಲಿ ಆಸ್ತಿ!
ರಾಜ್ಯದಲ್ಲಿ 48 ಲಕ್ಷ ಆಸ್ತಿಗಳು ಸಾವನಪ್ಪಿದವರ ಹೆಸರಿನಲ್ಲಿದೆ. ವ್ಯಕ್ತಿ ಸಾವನಪ್ಪಿದ ನಂತರ ಪೌತಿ ಖಾತೆಯ ಮೂಲಕ ಅವರ ವಾರಸುದಾರರಿಗೆ ಆ ಆಸ್ತಿ ಹಂಚಿಕೆ ಆಗಬೇಕಿದ್ದು, ಈ ಕೆಲಸ ನಡೆದಿಲ್ಲ. ಈ ವಿಷಯ ಸಹ ಆಧಾರ್ ಸಿಡಿಂಗ್ ವೇಳೆ ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನಲೆ ಪೌತಿ ಖಾತೆ ಮಾಡಿಕೊಡುವ ಬಗ್ಗೆ ವಿಶೇಷ ಆಂದೋಲನ ನಡೆಸಲು ಕಂದಾಯ ಸಚಿವ ಕೃಷ್ಣ ಬೈರೆಗೌಡ ಸೂಚಿಸಿದ್ದಾರೆ.
ಸರ್ಕಾರಿ ಭೂಮಿ ಮಂಜೂರಿ
ಸರ್ಕಾರದಿoದ ವಿವಿಧ ಹಂತದಲ್ಲಿ ಮಂಜೂರಾದ ಭೂಮಿಗೆ ಸಂಬoಧಿಸಿ ಈವರೆಗೂ ಅನೇಕರಿಗೆ ಭೂಮಿಯ ಹಕ್ಕು ಸಿಕ್ಕಿಲ್ಲ. 50 ವರ್ಷಗಳಿಂದ ಇಂಥ ಪ್ರಕರಣಗಳು ಬಾಕಿಯಿದ್ದು, ಸರ್ಕಾರಿ ಜಮೀನು ಸಾಗುವಳಿ ಪ್ರಕಾರ ಭೂಮಿ ಮಂಜೂರಿ ಆದವರನ್ನು ಸೇರಿ ಜಿಲ್ಲೆಯಲ್ಲಿ 30 ಸಾವಿರ ಜನರ ಹೆಸರಿಗೆ ಆ ಭೂಮಿ ಹಕ್ಕು ಸಿಗಲಿದೆ. ರಾಜ್ಯದಲ್ಲಿ 5 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದ್ದು, ಈಗಾಗಲೇ ಪೋಡಿ ಪ್ರಕ್ರಿಯೆ ಶುರುವಾಗಿದೆ’ ಎಂದು ಸಚಿವರು ತಿಳಿಸಿದರು.
ಶೀಘ್ರ ವಿಚಾರಣೆಗೆ ಸೂಚನೆ
ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು 90 ದಿನದಲ್ಲಿ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, 5 ವರ್ಷಗಳಿಂದ ಅನೇಕ ಪ್ರಕರಣಗಳು ಬಾಕಿಯಿದೆ. `ಈ ಎಲ್ಲಾ ಪ್ರಕರಣ ವಿಲೇವಾರಿಗೆ ಕ್ರಮ ಜರುಗಿಸಲಾಗಿದ್ದು, ಇದೀಗ ಹಳೆಯ ಪ್ರಕರಣಗಳನ್ನು ಮುಗಿಸಲಾಗಿದೆ. ಸಿವಿಲ್ ನ್ಯಾಯಾಲಯದಲ್ಲಿರುವ ಕೆಲವೇ ಪ್ರಕರಣಗಳು ಮಾತ್ರ ಬಾಕಿಯಿದೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಡತ ವಿಲೆವಾರಿಗೆ ಇ-ಆಫಿಸ್
`ಸರ್ಕಾರಿ ಕಚೇರಿಯಲ್ಲಿನ ಕಡತ ವಿಲೇವಾರಿಗೆ ಇ-ಆಫಿಸ್ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಜನಸಾಮಾನ್ಯರು ನೀಡುವ ಅರ್ಜಿ ಕಳೆದು ಹೋಗುತ್ತಿತ್ತು. ಬಡವರ ಕೆಲಸ ಆಗುತ್ತಿರಲಿಲ್ಲ. ಪ್ರಭಾವಿಗಳಿಗೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದರು. ಪ್ರಸ್ತುತ ಇ-ಆಫಿಸ್ ವ್ಯವಸ್ಥೆ ಬಂದಿರುವುದರಿ0ದ ಯಾವ ಅಧಿಕಾರಿ ಬಳಿ ಯಾವ ಕಡತಗಳು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಚಿವರು ನೋಡಲು ಸಾಧ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. `ಕಡತ ಕಳ್ಳತನ, ಅವಧಿ ಮೀರಿ ಕಡತ ಇರಿಸಿಕೊಳ್ಳಲು ಇದೀಗ ಸಾಧ್ಯವಿಲ್ಲ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.




