ಕಾರವಾರ: ಹಿರಿಯ ನಾಗರಿಕರ ಸಮಸ್ಯೆ ಆಲಿಸಿ ನೆರವು ನೀಡಲು ಸರ್ಕಾರ ಸಹಾಯವಾಣಿ ಜೊತೆ ಕಚೇರಿಯನ್ನು ತೆರೆದಿದೆ. ಆದರೆ, ಸಹಾಯವಾಣಿ ಕೆಲಸ ಮಾಡುತ್ತಿಲ್ಲ. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ!
ಉತ್ತರ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಒಳಭಾಗದಲ್ಲಿ ಈ ಸಹಾಯವಾಣಿ ಕೇಂದ್ರವಿದೆ. ಹುಬ್ಬಳ್ಳಿಯ ವೀರಭದ್ರೇಶ್ವರ ಚ್ಯಾರಿಟೇಬಲ್ ಟ್ರಸ್ಟ್’ಗೆ ಈ ಸಹಾಯವಾಣಿ ನಡೆಸಲು ಸರ್ಕಾರ ವಾರ್ಷಿಕ 7.25 ಲಕ್ಷ ರೂ ನೆರವು ನೀಡುತ್ತದೆ. ವೃದ್ಧರು 1090ಗೆ ಕರೆ ಮಾಡಿದರೆ ಅಂಥವರಿಗೆ ನೆರವಾಗಬೇಕು ಎಂಬುದು ಸರ್ಕಾರದ ನಿಯಮ. ವೃದ್ಧರಿಗೆ ನೆರವು ನೀಡಬೇಕಾಗಿರುವುದು ಅನುದಾನ ಪಡೆಯುತ್ತಿರುವ ವೀರಭದ್ರೇಶ್ವರ ಚ್ಯಾರಿಟೇಬಲ್ ಟ್ರಸ್ಟಿನ ಕರ್ತವ್ಯ. ಆದರೆ, ಈ ಸಹಾಯವಾಣಿಯ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಸರ್ಕಾರ ನೀಡಿದ 1090ಗೆ ಕರೆ ಮಾಡಿದರೂ ಉತ್ತರಿಸುವವರಿಲ್ಲ. ಉಳಿದಂತೆ ಇನ್ನೂ ಎರಡು ಖಾಸಗಿ ಫೋನ್ ನಂ ನೀಡಲಾಗಿದ್ದು, ಅದಕ್ಕೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ!
ಸಹಾಯವಾಣಿ ನಡೆಸುವುದಾಗಿ ತಿಳಿಸಿ ಅನುದಾನ ಪಡೆಯುತ್ತಿರುವ ಸಂಸ್ಥೆ ಸಹಾಯವಾಣಿ ಕೇಂದ್ರದ ಬಗ್ಗೆ ಜನ ಜಾಗೃತಿ ನಡೆಸಿಲ್ಲ. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿಯೇ ಕೊಠಡಿ ನೀಡಿದರೂ ಅದಕ್ಕೆ ಯೋಗ್ಯ ನಾಮಫಲಕ ಅಳವಡಿಸಿಲ್ಲ. ಆ ಕಚೇರಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಯನ್ನು ಸಹ ನಡೆಸಿಲ್ಲ. `ನ್ಯಾಯವಾದಿ, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದೆ’ ಎಂದು ಸಂಸ್ಥೆ ದಾಖಲೆಗಳಲ್ಲಿ ಹೇಳಿಕೊಂಡಿದ್ದರೂ, ಹಿರಿಯ ನಾಗರಿಕರ ಕ್ಷೇಮ ವಿಚಾರಿಸುವ ಆಪ್ತ ಸಮಾಲೋಚಕರು ಸಹ ಇಲ್ಲಿಲ್ಲ!
ಮೊದಲು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹೊರಭಾಗದಲ್ಲಿ ಈ ಸಹಾಯವಾಣಿ ಕೇಂದ್ರವಿತ್ತು. ನಂತರ ಕಳೆದ ಒಂದು ವರ್ಷಗಳಿಗೂ ಅಧಿಕ ಕಾಲ ಈ ಸಹಾಯವಾಣಿ ಕೇಂದ್ರ ಬಂದ್ ಆಗಿತ್ತು. ಕಳೆದ ಅಕ್ಟೊಬರ್ 2ರಂದು ಸಹಾಯವಾಣಿಯನ್ನು ಪುನ: ಶುರು ಮಾಡಲಾಗಿದೆ. ಆದರೆ, ಕನಿಷ್ಟ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಸಹ ಸಂಸ್ಥೆ ಮಾಡಿಕೊಂಡಿಲ್ಲ.
ಕೌಟುAಬಿಕ ವ್ಯಾಜ್ಯ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸ್ಪಂದಿಸುವ ಸಹಾಯವಾಣಿ ಕೇಂದ್ರ ಇದಾಗಬೇಕಿತ್ತು. ಆದರೆ, ಸಹಾಯವಾಣಿ ಕೇಂದ್ರವೇ ಸರಿಯಿಲ್ಲದ ಕಾರಣ ಜನರಿಂದ ಯಾವುದೇ ದೂರು ಬರುತ್ತಿಲ್ಲ. ದಿನದ 24 ತಾಸು ಈ ಕೇಂದ್ರ ತೆರದಿರಬೇಕು ಎಂಬ ನಿಯಮವಿದ್ದರೂ ಅದು ಪಾಲನೆ ಆಗುತ್ತಿಲ್ಲ. ಕಚೇರಿಗೆ ಹಿರಿಯ ನಾಗರಿಕರು ಭೇಟಿ ನೀಡಿದರೆ ಅವರನ್ನು ಮಾತನಾಡಿಸುವವರು ಸಹ ಇಲ್ಲಿಲ್ಲ!
`ಮೂರು ಇಲಾಖೆಗಳ ಸಮನ್ವಯದಿಂದ ಹಿರಿಯ ನಾಗರಿಕರ ಸಹಾಯವಾಣಿ ನಡೆಯುತ್ತಿದೆ. ಆದರೂ ಹಿರಿಯ ನಾಗರಿಕರ ಸಮಸ್ಯೆ ಆಲಿಸುವವರಿಲ್ಲ. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿನ ಕೊಠಡಿಯಲ್ಲಿ ಈ ಬಗ್ಗೆ ಸಮಸ್ಯೆಯಿರುವ ಬಗ್ಗೆ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಿಸುವ ಭರವಸೆ ನೀಡಿದ್ದಾರೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಹೇಳಿದರು. `ಹಿರಿಯ ನಾಗರಿಕರ ಇಲಾಖೆಗೆ ಖಾಯಂ ಅಧಿಕಾರಿ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣ’ ಎಂದವರು ವಿವರಿಸಿದರು.




