ಯಲ್ಲಾಪುರ: ಗಣ್ಯರು ಸಾವನಪ್ಪಿದಾಗ ಶಾಲೆಗೆ ರಜೆ ಕೊಡುವುದು ಸಾಮಾನ್ಯ. ಆದರೆ, ಯಲ್ಲಾಪುರದ ತೊಟ್ಟಿಲಗುಂಡಿಯಲ್ಲಿ ಊರಿನಲ್ಲಿ ಯಾರೇ ಸಾವನಪ್ಪಿದರೂ ಶಾಲೆಗೆ ರಜೆ ಕೊಡಲಾಗುತ್ತದೆ. ಶಾಲೆಗೆ ರಜೆ ಕೊಡದೇ ಇದ್ದರೂ ಆ ದಿನ ಮಕ್ಕಳು ಕಲಿಕೆಗೆ ಬರುವುದಿಲ್ಲ!
ಹುಬ್ಬಳ್ಳಿ – ಅಂಕೋಲಾ ರಸ್ತೆಯಲ್ಲಿ ಸಿಗುವ ಕಿರವತ್ತಿಯಿಂದ ಹಿಂದೆ ಬಲಕ್ಕೆ ತಿರುಗಿದರೆ ಅಲ್ಲಿ ತೊಟ್ಟಿಲಗುಂಡಿ ಶಾಲೆ ಸಿಗುತ್ತದೆ. ಬುಡಕಟ್ಟು ಪರಂಪರೆ ಹೊಂದಿದ ಕ್ರೆಸ್ತ ಸಿದ್ದಿ ಸಮುದಾಯದ ಮಕ್ಕಳು ಈ ಶಾಲೆಗೆ ಬರುತ್ತಾರೆ. ಪ್ರಸ್ತುತ 10 ಮಕ್ಕಳು ಅಲ್ಲಿ ಕಲಿಯುತ್ತಿದ್ದು, ಶುಕ್ರವಾರ ಊರಿನಲ್ಲಿ ವೃದ್ಧೆಯೊಬ್ಬರು ಸಾವನಪ್ಪಿದ ಕಾರಣ ಶಾಲೆಗೆ ರಜೆ ಘೋಷಿಸಲಾಗಿತು. `ಊರಿನಲ್ಲಿ ಸಾವುಗಳಾದಾಗ ಶಾಲೆಗೆ ರಜೆ ನೀಡುವುದು ಪದ್ಧತಿ’ ಎಂದು ಊರಿನವರು ತಿಳಿಸಿದರು.
`ಸಂಪ್ರದಾಯದ ಪ್ರಕಾರ ಸಾವನಪ್ಪಿದವರ ಮನೆಯಲ್ಲಿ ಶೋಕ ಆಚರಣೆ ನಡೆಯುತ್ತದೆ. ಆ ವೇಳೆ ಊರಿನ ಎಲ್ಲರೂ ಭಾಗವಹಿಸುತ್ತಾರೆ. ಶವಕ್ಕೆ ಅಂತಿಮ ನಮನ ಸಲ್ಲಿಸುವ ಕಾರ್ಯದಲ್ಲಿ ಮಕ್ಕಳು ಭಾಗಿಯಾಗುತ್ತಾರೆ. ಹೀಗಾಗಿ ಊರಿನಲ್ಲಿ ಯಾರಾದರೂ ಸಾವನಪ್ಪಿದರೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಅಲ್ಲಿದ್ದವರು ತಿಳಿಸಿದರು.
`ಶೋಕದ ಕಾರಣ ಆ ದಿನ ಯಾರೂ ಅಡುಗೆ ಮಾಡುವುದಿಲ್ಲ. ಹೀಗಾಗಿ ಊಟವೂ ಇಲ್ಲ. ಇದರಿಂದ ಶಾಲೆಯಲ್ಲಿ ಸಹ ಬಿಸಿಯೂಟ ಮಾಡಲಿಲ್ಲ. `ಇಂದು ಶಾಲೆಗೆ ಮಕ್ಕಳು ಬರುವುದಿಲ್ಲ’ ಎಂದು ಊರಿನವರು ಬೆಳಗ್ಗೆಯೇ ಶಿಕ್ಷಕರಿಗೆ ಫೋನ್ ಮಾಡಿ ಹೇಳಿದ್ದರು. ಶುಕ್ರವಾರ ಸಾವನಪ್ಪಿದವರು ಶಾಲಾ ಎಸ್ಡಿಎಂಸಿ ಸದಸ್ಯರಾಗಿರಲಿಲ್ಲ. ಶಾಲೆಗೆ ಹಾಗೂ ಅವರಿಗೆ ಸಂಬoಧವೂ ಇರಲಿಲ್ಲ. ಅದಾಗಿಯೂ ಶಾಲೆಗೆ ರಜೆ ನೀಡಿದ್ದರಿಂದ ಶಾಲೆಯ ಬಾಗಿಲು ತೆರೆಯಲು ಯಾರೂ ಬಂದಿರಲಿಲ್ಲ. `ತಾನು ಶಾಲೆಗೆ ಹೋಗಿ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ರಜೆ ಘೋಷಿಸಿ ಮರಳಿದೆ’ ಎಂದು ಶಿಕ್ಷಕ ಸಂತೋಷ ನಾಯ್ಕ ತಿಳಿಸಿದರು.
`ಶಾಲಾ ಎಸ್ಡಿಎಂಸಿಯವರ ಸೂಚನೆ ಮೇರೆಗೆ ಶಾಲೆಗೆ ರಜೆ ಕೊಡಲಾಗಿದೆ. ನನ್ನ ಸೇವಾ ಅವಧಿಯಲ್ಲಿ ಇಂಥ ಪ್ರಕರಣಗಳು ಅಪರೂಪ. ಸ್ಥಳೀಯ ರಜೆ ಹೊಂದಾಣಿಕೆ ಮಾಡಿಕೊಂಡು, ರಜೆ ನೀಡಲಾಗಿದೆ’ ಎಂದು ಶಿಕ್ಷಕ ಸಂತೋಷ ನಾಯ್ಕ ತಿಳಿಸಿದರು. `ಊರಿನಲ್ಲಿ ಸಾವು ಉಂಟಾದಾಗ ಶಾಲೆಗೆ ರಜೆ ನೀಡದಿದ್ದರೂ ಮಕ್ಕಳು ಬರುವುದಿಲ್ಲ. ಈ ಹಿಂದೆ ಶಾಲೆ ತೆರೆದು ಇಡೀ ದಿನ ಕಾದರೂ ಮಕ್ಕಳು ಬರದ ಉದಾಹರಣೆಗಳಿವೆ’ ಎಂದು ಸಂತೋಷ ನಾಯ್ಕ ವಿವರಿಸಿದರು.
ಶಿಕ್ಷಣಾಧಿಕಾರಿಗೆ ಗೊತ್ತೇ ಇಲ್ಲ!
`ತೊಟ್ಟಿಲಗುಂಡಿ ಶಾಲೆಗೆ ರಜೆ ಇರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ವಿಚಾರಿಸುವೆ’ ಎಂದು ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ತಿಳಿಸಿದರು. ನಂತರ ಈ ವಿಷಯದ ಬಗ್ಗೆ ಅರಿತ ಶಿಕ್ಷಣಾಧಿಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.




