ಕುಮಟಾ: ಮಾಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ನೆಲ ಅಗೆಯುತ್ತಿರುವಾಗ ವಿಚಿತ್ರ ಗುಹೆಯೊಂದು ಕಾಣಿಸಿದೆ. ಹಂಡೆ ಆಕಾರದಲ್ಲಿರುವ ಈ ಗುಹೆ 15 ಜನರನ್ನು ಏಕಕಾಲಕ್ಕೆ ಅಡಗಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಈ ಗುಹೆ ಯಾವ ಕಾಲದ್ದು? ಯಾವ ಉದ್ದೇಶಕ್ಕೆ ರಚಿತವಾಗಿದ್ದು ಎಂಬುದು ಈವರೆಗೂ ಖಚಿತವಾಗಿಲ್ಲ.
ಮಾಸೂರು ಗ್ರಾಮದ ಜೈನ ಜಟಕ ದೇವಾಲಯದ ಬಳಿ ಜಲ ಜೀವನ ಮಿಶನ್ ಯೋಜನೆ ಅಡಿ ಕುಡಿಯುವ ನೀರು ಕಾಮಗಾರಿಯ ಕೆಲಸ ನಡೆಯುತ್ತಿದೆ. ನೀರಿನ ಕೊಳವೆಗಳನ್ನು ಸಾಗಿಸುವುದಕ್ಕಾಗಿ ಮಣ್ಣು ಅಗೆಯುತ್ತಿರುವಾಗ ಅಲ್ಲಿ ಕಂದಕ ಕಾಣಿಸಿದೆ. ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಗುಹೆಯ ಬಾಗಿಲು ತೆರೆದಾಗ ಅಲ್ಲಿನ ಕಾರ್ಮಿಕರು ಅಚ್ಚರಿಗೆ ಒಳಗಾದರು. ಕೆಲವರು ಏಣಿ ಹಾಕಿ ಕೆಳಗೆ ಇಳಿದು ಪರಿಶೀಲನೆ ನಡೆಸಿದರು. ಆದರೆ, ಯಾವುದೇ ಮಾಹಿತಿ ಅಥವಾ ಕುರುಹುಗಳು ಗುಹೆಯ ಒಳಗೆ ಪತ್ತೆ ಆಗಿಲ್ಲ.
ಗುಹೆಯ ತಲೆಭಾಗದಲ್ಲಿ ಸಣ್ಣ ರಂದ್ರವಿದೆ. ಒಳ ಪ್ರವೇಶಿಸಿದಂತೆ ಆ ರಂದ್ರ ಡೊಡ್ಡವಾಗುತ್ತಿದ್ದು, 10 ಅಡಿ ಆಳ ಹಾಗೂ ಅಷ್ಟೇ ಪ್ರಮಾಣದ ಅಗಲವನ್ನು ಹೊಂದಿದೆ. ಸಂಪೂರ್ಣ ಕಲ್ಲಿನ ಶಿಲೆಗಳಿಂದ ಈ ಗುಹೆ ರಚಿತವಾಗಿದ್ದು, ಅತ್ಯಂತ ಹಳೆಯ ಕಾಲದಲ್ಲಿಯೇ ಗುಹೆಯನ್ನು ಕೆತ್ತಿರಬಹುದು ಎಂದು ಅಂದಾಜಿಸಲಾಗಿದೆ. ಪಕ್ಕದ ದೇವಾಲಯ ಹಾಗೂ ನಿರ್ಮಿಸಲಾದ ಕಪೌಂಡ್ ಅಡಿಭಾಗದಲ್ಲಿ ಈ ಗುಹೆ ವಿಸ್ತರಿಸಿಕೊಂಡಿದೆ. ಸದ್ಯ ಬದುಕಿರುವ ಹಿರಿಯ ತಲೆಮಾರಿನವರಿಗೆ ಸಹ ಗುಹೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ದೇವಾಲಯದಕ್ಕೆ ತಾಗಿಕೊಂಡು ಗುಹೆಯ ಪ್ರವೇಶ ದ್ವಾರವಿದೆ. `ರಾಜರ ಕಾಲದಲ್ಲಿ ದವಸ-ಧಾನ್ಯಗಳನ್ನು ಸಂಗ್ರಹಿಸಿಡುವ ಉದ್ದೇಶದಿಂದ ಈ ಗುಹೆ ಕೊರೆದಿರುವ ಸಾಧ್ಯತೆಯಿದೆ’ ಎಂದು ಸ್ಥಳೀಯ ಮುಖಂಡ ಮಂಜುನಾಥ ಪಟಗಾರ ಅಂದಾಜಿಸಿದರು. `ಶತ್ರು ದಾಳಿಯಿಂದ ರಕ್ಷಿಸಿಕೊಳ್ಳುವ ಉದ್ದೇಶಕ್ಕಾಗಿಯೂ ಈ ಗುಹೆ ಕೊರೆದಿರಬಹುದು’ ಎನ್ನುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
`ಇದು ಪ್ರಾಚೀನ ಕಾಲದ ಬಾವಿ. ನೀರು ಬತ್ತಿರುವ ಸಾಧ್ಯತೆಗಳಿವೆ. ಅಧ್ಯಯನದ ನಂತರ ನಿಖರವಾಗಿ ಹೇಳಲು ಸಾಧ್ಯ’ ಎಂದು ಇತಿಹಾಸ ತಜ್ಞ ಲಕ್ಷೀಶ ಹೆಗಡೆ ಸೋಂದಾ ಪ್ರತಿಕ್ರಿಯಿಸಿದರು. ಗುಹೆ ಪತ್ತೆಯಾಗಿ ಒಂದು ವಾರ ಕಳೆದರೂ ಭಾರೀ ಪ್ರಮಾಣದಲ್ಲಿ ಸುದ್ದಿಯಾಗಿಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಯವರು ಸ್ಥಳಕ್ಕೆ ಬಂದಿಲ್ಲ. ಸಂಶೋಧನೆ ಸಹ ನಡೆದಿಲ್ಲ. ಹೀಗಾಗಿ ಆ ಗುಹೆಯ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ.




