ಕುಮಟಾ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತದ್ದ ಹುಬ್ಬಳ್ಳಿಯ ಕಾರ್ಮಿಕ ಇಮ್ತಿಯಾಜ್ ಎಂಬಾತನ ಕೊಲೆಯಾಗಿದೆ. ಆತನ ಜೊತೆ ಕೆಲಸಕ್ಕೆ ಬಂದಿದ್ದ ಸಹಚರರೇ ಚೀರೆಕಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಿದ್ದಾರೆ.
ಹರಿಹರದ ಚೈತನ್ಯಕುಮಾರ ಮುನ್ನಿ ಕಂಪನಿಯವರು ಸರ್ಕಾರಿ ಆಸ್ಪತ್ರೆಯ ದುರಸ್ತಿ ಕೆಲಸ ಮಾಡುತ್ತಿದ್ದರು. ಸುಪ್ರವೈಸರ್ ಮಂಜುನಾಥ ಬಸಪ್ಪ ಎಂಬಾತರು ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದ್ದರು. ಆ ಕಾರ್ಮಿಕರಿಗೆ ಆಸ್ಪತ್ರೆಯ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ಅವಕಾಶವನ್ನು ಮಾಡಿಕೊಟ್ಟಿದ್ದರು.
ಅಕ್ಟೊಬರ್ 27ರಂದು ಗೌಂಡಿ ಕೆಲಸ ಮಾಡುವ ಮುನಿಯಪ್ಪಾ ಶೇಖಪ್ಪಾ ದಾವಣಗೆರೆ (55), ಕಟ್ಟಡ ಕಾರ್ಮಿಕ ಸಾಧಿಕ್ ಬಾಬಜಾನ್ ನಾಯ್ಕೋಡಿ (25) ಹಾಗೂ ಇಮ್ತಿಯಾಜ್ ರಾಯಭಾಗಿ (34) ಸೇರಿ ಪಾರ್ಟಿ ಮಾಡಿದ್ದರು. ತಡರಾತ್ರಿಯವರೆಗೂ ಅವರು ಮದ್ಯದ ನಶೆಯಲ್ಲಿ ಮೋಜು ಮಸ್ತಿಯಲ್ಲಿದ್ದರು. ಈ ವೇಳೆ ಕುಡಿದ ನಶೆಯಲ್ಲಿ ಅವರಲ್ಲಿ ಜಗಳ ಶುರುವಾಗಿದ್ದು, ಪರಸ್ಪರ ಹೊಡೆದಾಟ ನಡೆದಿದೆ. ಅದೇ ಸಿಟ್ಟಿನಲ್ಲಿ ಹುಬ್ಬಳ್ಳಿ ಆನಂದ ನಗರದ ಮುನಿಯಪ್ಪಾ ಹಾಗೀ ಹಳೆ ಹುಬ್ಬಳ್ಳಿ ಇಂಡಿಯನ್ ಸ್ಕೂಲ್ ಬಳಿಯ ಸಾಧೀಕ್ ಸೇರಿ ಹುಬ್ಬಳ್ಳಿ ಇಂದಿರಾನಗರದ ಇಮ್ತಿಯಾಜ್’ನನ್ನು ಕೊಲೆ ಮಾಡಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಬಳಸುವ ಚೀರೆಕಲ್ಲಿನಿಂದ ಮುಖ ಹಾಗೂ ಮೈಗೆ ಜಜ್ಜಿ ಆತನನ್ನು ಕೊಲೆ ಮಾಡಿದ ಇಬ್ಬರು ನಂತರ ಹುಬ್ಬಳ್ಳಿ ಕಡೆ ತೆರಳಿದ್ದು, ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಸೋಮವಾರ ಬೆಳಗ್ಗೆ 6.45ರ ಆಸುಪಾಸಿಗೆ ಶವ ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಹುಬ್ಬಳ್ಳಿಗೆ ತೆರಳಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತರ ವಿಚಾರಣೆ ನಡೆಯುತ್ತಿದೆ.
ಕಾರ್ಮಿಕರಿಬ್ಬರೂ ಸೇರಿ ಇನ್ನೊಬ್ಬ ಕಾರ್ಮಿಕನನ್ನು ಕೊಲೆ ಮಾಡಿದ ಬಗ್ಗೆ . ಸುಪ್ರವೈಸರ್ ಮಂಜುನಾಥ ಬಸಪ್ಪ ಪೊಲೀಸ್ ದೂರು ನೀಡಿದ್ದಾರೆ.




