ಕಾರವಾರ: ಕಳೆದ ಮೂರು ತಿಂಗಳ ಹಿಂದೆ ಸರ್ಕಾರ 7ನೇ ವೇತನ ಆಯೋಗದ ಪ್ರಕಾರ ಪಿಂಚಣಿ ಪಾವತಿಸಲು ಒಪ್ಪಿದ್ದು, ಆ ಹಣ ಬ್ಯಾಂಕಿಗೆ ಜಮಾ ಆದರೂ ನಿವೃತ್ತ ನೌಕರರ ಕೈ ಸೇರಿಲ್ಲ. ಹೀಗಾಗಿ ಸೋಮವಾರ ಎಸ್ಬಿಐ ಬ್ಯಾಂಕಿಗೆ ಜಮಾಯಿಸಿದ ನಿವೃತ್ತ ನೌಕರರು ಅಲ್ಲಿನ ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು.
ಬೇರೆ ಬೇರೆ ಬ್ಯಾಂಕಿನಲ್ಲಿ ಖಾತೆ ಹೊಂದಿದವರಿಗೆ 7ನೇ ವೇತನ ಆಯೋಗದ ಪ್ರಕಾರ ಪಿಂಚಣಿ ಸಿಕ್ಕಿದೆ. ಆದರೆ, ಎಸ್ಬಿಐ ಖಾತೆ ಹೊಂದಿದವರಿಗೆ ಮಾತ್ರ ಆ ಹಣ ದೊರೆತಿಲ್ಲ. ಹೀಗಾಗಿ ದೀಪಾವಳಿ ಹಬ್ಬದ ವೇಳೆ ಒಂದಷ್ಟು ಹೆಚ್ಚಿನ ಕಾಸು ಸಿಗುತ್ತದೆ ಎಂದು ನಂಬಿದವರಿಗೆ ನಿರಾಸೆಯಾಗಿದೆ. ಈ ಬಗ್ಗೆ ಪ್ರಶ್ನಿಸಿಲು ತೆರಳಿದ ಹಿರಿಯ ನಾಗರಿಕರಿಗೆ ಬ್ಯಾಂಕ್ ಅಧಿಕಾರಿಗಳು ಅಸಡ್ಡೆಯಿಂದ ವರ್ತಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ `ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿದೆ’ ಎಂದು ಬ್ಯಾಂಕ್ ಅಧಿಕಾರಿಗಳು ಸಮಜಾಯಿಶಿ ನೀಡಿದರು.
`6ನೇ ವೇತನ ಆಯೋಗ ಜಾರಿಯಾದಾಗ 15 ದಿನದಲ್ಲಿ ವೇತನದ ಹಣ ಫಲಾನುಭವಿಗಳಿಗೆ ದೊರೆತಿತ್ತು. ಆದರೆ, ಇದೀಗ ಮೂರು ತಿಂಗಳು ಕಳೆದರೂ ಘೋಷಣೆಯಾದ ಹಣ ಸಿಕ್ಕಿಲ್ಲ. ಸಣ್ಣ ಹುದ್ದೆಯಿಂದ ನಿವೃತ್ತರಾದ ನೌಕರರಿಗೂ ಕನಿಷ್ಟ 7 ಸಾವಿರ ರೂ ಹೆಚ್ಚುವರಿಯಾಗಿ ಸಿಗಬೇಕಿದ್ದು, ಬ್ಯಾಂಕ್ ಲೋಪದಿಂದ ಅದು ಖಾತೆಗೆ ಜಮಾ ಆಗಿಲ್ಲ’ ಎಂದು ಅಲ್ಲಿ ನೆರೆದಿದ್ದವರು ವಿವರಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ಹಣ ಒಟ್ಟಿಗೆ ನೀಡುವುದಾಗಿ ಬ್ಯಾಂಕಿನವರು ಭರವಸೆ ನೀಡಿದರು.




