ಕುಮಟಾ: ಮಾಸೂರು ಕ್ರಾಸ್ ಜನತಾ ಪ್ಲಾಟಿನ ಮಂಜುನಾಥ ಅಂಬಿಗ ಅವರಿಗೆ ವಯಸ್ಸಾಗಿದೆ. ದುಡಿಯಲು ಮೈಯಲ್ಲಿ ತ್ರಾಣವಿಲ್ಲ. ತಿಂಗಳಿಗೆ ಸಾವಿರ ರೂ ಸಹ ಆದಾಯವಿಲ್ಲ. ಅದಾಗಿಯೂ ವಾರ್ಷಿಕ 40 ಸಾವಿರ ರೂ ಆದಾಯ ಹೊಂದಿರುವ ಬಗ್ಗೆ ಅಧಿಕಾರಿಗಳು ಅವರಿಗೆ ಆದಾಯ ಪ್ರಮಾಣ ಪತ್ರ ಕರುಣಿಸಿದ್ದು, ಇದರಿಂದ ನ್ಯಾಯಯುತವಾಗಿ ಬರಬೇಕಿದ್ದ `ಸಂದ್ಯಾ ಸುರಕ್ಷಾ’ ಯೊಜನೆಯೂ ಸಿಗುತ್ತಿಲ್ಲ!
ಸರ್ಕಾರದ ನಿಯಮದ ಪ್ರಕಾರ ವಾರ್ಷಿಕ 32 ಸಾವಿರ ರೂ ಆದಾಯ ಇದ್ದವರಿಗೆ ಮಾತ್ರ ಈ ಯೋಜನೆಯಿಂದ ನೆರವು ಸಿಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಂಜುನಾಥ ಅಂಬಿಗ ಅವರು ಎಲ್ಲಾ ರೀತಿಯಲ್ಲಿಯೂ ಅರ್ಹರಿದ್ದಾರೆ. ಆದರೆ, ಅಧಿಕಾರಿಗಳ ಅಸಡ್ಡೆಯಿಂದ ಅವರಿಗೆ ಅನ್ಯಾಯವಾಗಿದೆ. ಮಂಜುನಾಥ ಅಂಬಿಗ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಅವರ ಆದಾಯದ ಬಗ್ಗೆ ಸರಿಯಾದ ವರದಿ ಸಲ್ಲಿಸಿದ್ದಾರೆ. ಅದಾಗಿಯೂ ಉಪತಹಶೀಲ್ದಾರ್ ಅವರ 40 ಸಾವಿರ ರೂ ಆದಾಯ ಹೊಂದಿರುವ ಬಗ್ಗೆ ಪತ್ರ ನೀಡಿದ್ದಾರೆ.
ತನಗಾದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಮಂಜುನಾಥ ಅಂಬಿಗ ಇದೀಗ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಹೊಲನಗದ್ದೆ ಗ್ರಾಮ ಲೆಕ್ಕಾಧಿಕಾರಿ ಸರಿಯಾದ ವರದಿ ನೀಡಿದರೂ ಉಪತಹಶೀಲ್ದಾರ್ ತಪ್ಪು ಪ್ರಮಾಣ ಪತ್ರ ನೀಡಿದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




