ಕಾರವಾರ: ಕೋವೆ, ಕೆರವಡಿ, ಸಕಲವಾಡ, ಬಾಡ ಹಾಗೂ ನಂದನಗದ್ದಾ ಭಾಗದ ಮಕ್ಕಳಿಗೆ ಪಾಠ ಮಾಡಿದ ದಿಲೀಪ ಗುರವ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶವಾದ ಸಿದ್ಧರದಲ್ಲಿ ಜನಿಸಿದ ಅವರು ಹಿಂದುಳಿದ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಬಹುಭಾಷಾ ಪಾಂಡಿತ್ಯ ಹೊಂದಿರುವ ದಿಲೀಪ ಗುರವ್ ಅವರು 1992ರಲ್ಲಿ ಕೋವೆ ಶಾಲೆಯಲ್ಲಿ ತಮ್ಮ ಸೇವೆ ಶುರು ಮಾಡಿದರು. ಆಗ ಆ ಊರಿಗೆ ತೆರಳಲು ರಸ್ತೆ ಸಹ ಇರಲಿಲ್ಲ. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಅಲ್ಲಿ ಒಂದು ಕೊಠಡಿಯೂ ಸರಿಯಾಗಿರಲಿಲ್ಲ. 12 ವರ್ಷಗಳ ಕಾಲ ಅಲ್ಲಿ ಶಿಕ್ಷಕರಾಗಿದ್ದ ಅವರು ಅವರಿವರನ್ನು ಕಾಡಿಬೇಡಿ ಆ ಶಾಲೆಗೆ ಎರಡು ಕೊಠಡಿ ನಿರ್ಮಿಸಿದರು. ಜೊತೆಗೆ ಹಳೆಯ ಕೊಠಡಿಯನ್ನು ಸಹ ಜೀರ್ಣೋದ್ದಾರ ಮಾಡಿದರು.
ಹಿಂದುಳಿದ ಪ್ರದೇಶದಲ್ಲಿ ಕಲಿಯುವ ಶಾಲಾ ಮಕ್ಕಳ ಶೈಕ್ಷಣಿಕ ಬದುಕಿನ ಬಗ್ಗೆ ದಿಲೀಪ ಗುರವ್ ಅಪಾರ ಕಾಳಜಿ ಹೊಂದಿದ್ದಾರೆ. ಕೋವೆ ನಂತರ ಅವರು 2004ರಲ್ಲಿ ಕೆರವಡಿಗೆ ವರ್ಗವಾಗಿದ್ದು, ಅಲ್ಲಿ ಸಹ ಸಹದ್ಯೋಗಿಗಳ ಸಹಕಾರ ಪಡೆದು `ಇಂಗ್ಲೀಷ್ ಸಂಪನ್ಮೂಲ ಕೇಂದ್ರ’ ನಿರ್ಮಾಣ ಮಾಡಿದರು. ಕೆರವಡಿ ಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ, ತಾಲೂಕಾ ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಬರುವಲ್ಲಿ ದಿಲೀಪ ಗುರವ್ ಅವರ ಶ್ರಮ ಅಪಾರ. ಕೆರವಡಿ ಶಾಲೆ ಮುಖ್ಯ ಶಿಕ್ಷಕಿ ಶೈಲಾ ಬಂಟರ ಮುಂದಾಳತ್ವದಲ್ಲಿ ಅವರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ.
2019ರ ಅವಧಿಗೆ ಅವರು ಸಕಲವಾಡದ ಶಾಲೆಗೆ ವರ್ಗವಾದರು. ಅಲ್ಲಿಂದ ಮುಂದೆ ಬಾಡದ ಎಂಎಚ್ಪಿಎಸ್ ಶಾಲೆಗೆ ಪ್ರಭಾರಿಯಾಗಿ ಮುಖ್ಯ ಶಿಕ್ಷಕರಾದರು. ಬಾಡದ ಶಾಲೆಯ ಎರಡು ಕೊಠಡಿ ಕುಸಿದಾಗ ಅಳುಕದೇ ತುರ್ತಾಗಿ ಮಕ್ಕಳನ್ನು ನಂದನಗದ್ದಾ ಶಾಲೆಗೆ ಕಳುಹಿಸಿದ್ದರು. ಅಲ್ಲಿಯೂ ತೆರಳಿ ಅವರು ಪಾಠ ಮಾಡಿದರು. ಬಾಡದಲ್ಲಿ ಕುಸಿದ ಕೊಠಡಿಗಳ ಬದಲಾಗಿ ಹೊಸ ಕಟ್ಟಡ ನಿರ್ಮಿಸುವಲ್ಲಿಯೂ ಪ್ರಯತ್ನ ಮಾಡಿದರು. ಬೇರೆ ಬೇರೆ ಶಾಲೆಗಳಿಗೆ ಹಂಚಿಹೋಗಿದ್ದ ಮಕ್ಕಳನ್ನು ಮತ್ತೆ ತಮ್ಮ ಶಾಲೆಗೆ ಮರಳಿಸಿ, ಶಾಲೆಯನ್ನು ಉಳಿಸಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಶಾಲೆಗೆ ಮಕ್ಕಳ ಬರುವಿಕೆಗಾಗಿ ಅವರು ಪ್ರತಿ ತಿಂಗಳು 4 ಸಾವಿರ ರೂ ವೆಚ್ಚ ಮಾಡಿ ರಿಕ್ಷಾ ಸೇವೆ ಪಡೆದರು. ಮಕ್ಕಳ ಓಡಾಟಕ್ಕೆ ಅನುಕೂಲವಾಗುವಾಗುವಂತೆ ಶಾಲೆಗೆ ನಿತ್ಯ ರಿಕ್ಷಾ ಮೂಲಕ ಮಕ್ಕಳನ್ನು ಕರೆಯಿಸುವ ಕಾಯಕಕ್ಕೆ ಇನ್ನಿತರ ಶಿಕ್ಷಕರು ಕೈ ಜೋಡಿಸಿದ್ದರು.
ಬಾಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಸ್ವತಃ ಆರ್ಥಿಕ ನೆರವು ನೀಡಿದರು. ಗೋಡೆಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಕವಿಗಳ ಚಿತ್ರ ಹಾಗೂ ವಿಶೇಷ ನುಡಿಮುತ್ತುಗಳನ್ನು ಬರೆಯಿಸಿ ಶಾಲೆಯ ಅಂದ ಹೆಚ್ಚಿಸಿದರು. ಶಾಲೆಯ ಕಂಬಗಳಿಗೆ ಬಣ್ಣ ಬಡಿಯುವಿಕೆ, ಕೈ ತೋಟ ನಿರ್ಮಾಣಕ್ಕಾಗಿ ತಮ್ಮ ಸಂಬಳದ ಹಣವನ್ನು ತೆಗೆದಿಟ್ಟರು. ಇದಲ್ಲದೇ ಪ್ರತಿಭಾನ್ವಿತ ಮಕ್ಕಳು ಸಾಧನೆ ಮಾಡಿದಾಗಲೆಲ್ಲ ಅವರಿಗೆ ನಗದು ಬಹುಮಾನ ನೀಡಿ ದಿಲೀಪ ಗುರವ್ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. `ಮಕ್ಕಳಿಗೆ ಪಠ್ಯ ವಿತರಣೆ, ಮಳೆಗಾಲದ ರಕ್ಷಣೆಗೆ ಬಡ ಮಕ್ಕಳಿಗೆ ರೇನ್ಕೋಟ್ ವಿತರಣೆ, ಬಿಸಿಯೂಟಕ್ಕೆ ಪೌಷ್ಠಿಕ ಆಹಾರದ ನೆರವು, ಶಾಲೆ ಧ್ವಜಸ್ಥಂಬಕ್ಕೆ ಕೊಡುಗೆ, ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಸೇರಿ ಅವರು ಮಾಡಿದ ಜನ ಸೇವೆಗೆ ಲೆಕ್ಕವಿಲ್ಲ’ ಎಂದು ಅವರ ಒಡನಾಡಿ ಶಿಕ್ಷಕ ಅಕ್ತರ್ ಸಯ್ಯದ್ ಅನಿಸಿಕೆ ವ್ಯಕ್ತಪಡಿಸಿದರು.
`ಸಹದ್ಯೋಗಿಗಳ ಜೊತೆಯೂ ಅವರು ಶಾಂತ ಸ್ವಭಾವದಿಂದ ಇರುತ್ತಿದ್ದರು. ಎಲ್ಲರ ಬಗ್ಗೆ ಅಪಾರ ಪ್ರೀತಿ-ಕಾಳಜಿ ತೋರಿಸುತ್ತಿದ್ದರು’ ಎಂದು ಶಿಕ್ಷಕಿ ಸ್ಮಿತಾ ನಾಯ್ಕ, ಸಂಗೀತಾ ನಾಗ್ವೇಕರ್, ರಾಜೇಶ ಗುರವ್ ಅವರ ಸೇವೆ ಸ್ಮರಿಸಿದರು. ಅಕ್ಟೊಬರ್ 31ರಂದು ಅಪರೂಪದ ಶಿಕ್ಷಕ ದಿಲೀಪ ಗುರವ್ ತಮ್ಮ ಶೈಕ್ಷಣಿಕ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಆದರೆ, ಅವರ ಸಾಮಾಜಿಕ ಸೇವೆಗೆ ಎಂದಿಗೂ ನಿವೃತ್ತಿ ಇಲ್ಲ!




