ಕಾರವಾರ: ವಿವಿಧ ವ್ಯಾಪಾರಿ ಮಳಿಗೆ ಹಾಗೂ ಸರ್ಕಾರಿ ಕಚೇರಿ ನಾಮಫಲಕದಲ್ಲಿ ಕನ್ನಡ ಬರವಣಿಗೆ ಕಾಣದಿರುವ ಬಗ್ಗೆ ಜಯ ಕರ್ನಾಟಕ ಜನಪರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
`ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಕನ್ನಡದ ಬರಹಗಳಿರಬೇಕು. ಕೆಲಸ ಕೊಡುವಾಗ ಕನ್ನಡಿಗರಿಗೆ ಆದ್ಯತೆ ಕೊಡಬೇಕು. ಇಲ್ಲವಾದಲ್ಲಿ ಹೋರಾಟ ನಿಶ್ಚಿತ’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದ್ದಾರೆ.
`ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಆದರೆ, ಪ್ರಾಚೀನ ಕಾಲದ ಈ ಭಾಷೆಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಸರ್ಕಾರ ಕನ್ನಡ ಉಳಿಸುವಿಕೆಗೆ ಸಾಕಷ್ಟು ಕ್ರಮ ಜರುಗಿಸಿದರೂ ಅನೇಕ ಕಚೇರಿ ಹಾಗೂ ಮಳಿಗೆಗಳಲ್ಲಿ ಕನ್ನಡ ಕಾಣಿಸುತ್ತಿಲ್ಲ’ ಎಂದು ಸಂಘಟನೆಯ ರೋಷನ್ ಹರಿಕಂತ್ರ ಹಾಗೂ ಸುದೇಶ್ ನಾಯ್ಕ ಹೇಳಿದ್ದಾರೆ.
`ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿರುವ ಎಲ್ಲಾ ನಾಮಫಲಕ ತೆರವು ಮಾಡಬೇಕು. ದ್ವಿಭಾಷಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಅಕ್ಷರಗಳನ್ನು ದೊಡ್ಡದಾಗಿ ಬರೆಯಬೇಕು. ನೌಕಾನೆಲೆ, ಅಣು ಸ್ಥಾವರ, ಬಂದರು ಮತ್ತು ವಿಮಾನ ನಿಲ್ದಾಣ ಮೊದಲಾದ ಕಡೆ ಉದ್ಯೋಗ ನೀಡುವಾಗಿ ಕನ್ನಡಿಗರನ್ನು ಪರಿಗಣಿಸಬೇಕು’ ಎಂದು ಸಂಘಟನೆಯ ಸುನಿಲ್ ತಾಂಡೇಲ್, ಮೋಹನ್ ಉಳ್ವೇಕರ ಒತ್ತಾಯಿಸಿದರು.




