ಕಾರವಾರ: `ಶಾಸಕ ಸತೀಶ್ ಸೈಲ್’ಗೆ ಶಿಕ್ಷೆಯಾಗಲು ಗುರುಮಠದ ಶಾಪ ಕಾರಣ’ ಎಂದು ಹೇಳಿಕೆ ನೀಡಿದ್ದ ಸಂತೋಷ ನಾಯ್ಕ ಗುರುಮಠ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಲೆಕೇರೆ ಅದಿರು ಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ಸತೀಶ್ ಸೈಲ್’ಗೆ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನಲೆ ದೃಶ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಂತೋಷ ನಾರಾಯಣ ನಾಯ್ಕ `ಶಾಸಕ ಸತೀಶ್ ಸೈಲ್ ಗುರುಮಠದ ಆಸ್ತಿ ಹೊಡೆಯಲು ಸಂಚು ರೂಪಿಸಿದ್ದರು. ಮಠದಲ್ಲಿನ ಕೋಟ್ಯಂತರ ರೂ ಹಣವನ್ನು ಅವರು ದೋಚಿದ್ದಾರೆ. ಇದೇ ಕಾರಣದಿಂದ ಅವರಿಗೆ ಗುರುಮಠದ ಶಾಪ ತಗುಲಿದೆ’ ಎಂದು ಹೇಳಿಕೆ ನೀಡಿದ್ದರು. ಕೆಲ ವಾಹಿನಿಗಳಲ್ಲಿ ಈ ವರದಿ ಪ್ರಸಾರವಾಗಿತ್ತು.
`ಗುರುಮಠದ ಭಕ್ತ ಮಂಡಳಿ ಹಾಗೂ ಆಡಳಿತದ ನಡುವೆ ಎರಡು ಗುಂಪುಗಳಿದ್ದು, ಈ ಬಗೆಯ ಹೇಳಿಕೆಯಿಂದ ದೊಂಬಿ-ಗಲಾಟೆ ನಡೆಯುವ ಸಾಧ್ಯತೆಗಳಿವೆ. ಗಲಾಟೆ ನಡೆಯಲಿ ಎಂಬ ಉದ್ದೇಶದಿಂದಲೇ ಸಂತೋಷ ನಾಯ್ಕ ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಕೋಡಿಭಾಗ ತಾಮ್ಸೆವಾಡದ ಗುತ್ತಿಗೆದಾರ ರೋಹಿದಾಸ ವಿಷ್ಣು ಕೋಠಾರಕರ್ ದೂರಿದ್ದಾರೆ. ಮಠದ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಪೊಲೀಸ್ ದೂರು ನೀಡಿರುವುದಾಗಿ ರೋಹಿದಾಸ ವಿಷ್ಣು ಕೋಠಾರಕರ್ ಹೇಳಿದ್ದಾರೆ.
ಈ ಹಿಂದೆ ಸಂತೋಷ್ ನಾಯ್ಕ ಸತೀಶ್ ಸೈಲ್ ಅವರ ಆಪ್ತರಾಗಿದ್ದರು. ಗುರುಮಠದ ಅಧ್ಯಕ್ಷ ಸ್ಥಾನದ ವಿಷಯವಾಗಿ ಸಂತೋಷ ನಾಯ್ಕ ಹಾಗೂ ಸತೀಶ್ ಸೈಲ್ ನಡುವೆ ಜಟಾಪಟಿ ನಡೆದಿತ್ತು. ಈ ವಿಷಯವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಪ್ರಸ್ತುತ ಸತೀಶ್ ಸೈಲ್ ಜೈಲು ಸೇರಿರುವ ಹಿನ್ನಲೆ ಸಂತೋಷ ನಾಯ್ಕ ಗುರುಮಠದ ವಿಷಯದ ಬಗ್ಗೆ ಮಾತನಾಡಿದ್ದು, ದೂರುದಾರರು ಸಂತೋಷ್ ನಾಯ್ಕ ಉದ್ರೇಕಕಾರಿ ಹೇಳಿಕೆ ನೀಡಿದ ಬಗ್ಗೆ ಆರೋಪಿಸಿದ್ದಾರೆಯೇ ವಿನ: ಅವರು ಸುಳ್ಳು ಹೇಳಿದ ಬಗ್ಗೆ ಆರೋಪಿಸಿಲ್ಲ!




