ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈರೇಶ ನಾಯ್ಕ ಸಾವನಪ್ಪಿದ್ದಾರೆ. ಕೊನೆ ಕ್ಷಣದವರೆಗೂ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.
ಈರೇಶ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಕೊಲಸಿರ್ಸಿಯವರಾಗಿದ್ದರು. ಶಿರಸಿ-ಬೆಂಗಳೂರು ಬಸ್ಸಿಗೆ ಅವರು ಚಾಲಕರಾಗಿದ್ದರು. ಬಸ್ಸಿನ ಒಳಗೆ ಅವರು ತಮ್ಮ ಕನ್ನಡ ಪ್ರೇಮ ಮೆರೆದಿದ್ದರು. ಕನ್ನಡ ರಾಜ್ಯೋತ್ಸವ ಅವಧಿಯಲ್ಲಿ ಮಾತ್ರವಲ್ಲದೇ, ಅನುದಿನವೂ ಅವರು ಕನ್ನಡವನ್ನು ಆರಾಧಿಸುತ್ತಿದ್ದರು. ಬಸ್ಸಿನ ಒಳಗೆ ಅವರು ಕನ್ನಡ ಧ್ವಜ ಹಾಗೂ ಸಾಧಕರ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಬಸ್ಸನ್ನು ಸಹ ಅಷ್ಟೇ ಅಂದವಾಗಿ ಅಲಂಕರಿಸಿದ್ದರು. ತಾವು ಹೋದ ಕಡೆಗಳೆಲ್ಲ ಕನ್ನಡ ಪ್ರೇಮ ಮೆರೆದು ಜನರಲ್ಲಿ ಭಾಷೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ಅವರಿಗೆ ಜ್ವರ ಕಾಣಿಸಿತು. ಕೆಲವರು ಅದನ್ನು ಡೆಂಗ್ಯು ಎಂದರು. ಆದರೆ, ಡೆಂಗ್ಯು ಎನ್ನುವುದು ಖಚಿತವಾಗಿರಲಿಲ್ಲ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು. ಸಹದ್ಯೋಗಿಗಳು ಸಹ ಹಣಕಾಸಿನ ನೆರವು ನೀಡಿದ್ದರು. ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುರುವಾರ ಸಂಜೆ ಅವರ ಶವವನ್ನು ಶಿರಸಿ ಬಸ್ ಡಿಪೋ ಬಳಿ ತರಲಾಗಿದ್ದು, ಅನೇಕ ಅಧಿಕಾರಿ-ಸಿಬ್ಬಂದಿ ಆಗಮಿಸಿ ಅಂತಿಮ ದರ್ಶನ ಪಡೆದರು.




