ಶಿರಸಿ: ನಿಧಾನವಾಗಿ ಓಡಿಸುತ್ತಿದ್ದ ರಾಘವೇಂದ್ರ ನಾಯ್ಕ ಎಂಬಾತರಿಗೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ರಾಘವೇಂದ್ರ ಅವರಿಗೆ ಪೆಟ್ಟಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದಿರುವುದನ್ನು ನೋಡಿಯೂ ಕಾರು ಚಾಲಕ ಉಪಚಾರ ಮಾಡಿಲ್ಲ. ಕಾರಿನ ನೊಂದಣಿ ಸಂಖ್ಯೆ ನೋಡಿದ್ದ ಇಳಸೂರಿನ ಗೋವಿಂದ ಪೂಜಾರಿ ಆ ಅಪರಿಚಿತ ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಅಕ್ಟೊಬರ್ 31ರ ಬೆಳಗ್ಗೆ 8.30ರ ವೇಳೆಗೆ ಶಿರಸಿಯಿಂದ ಎಕ್ಕಂಬಿ ಕಡೆ ರಾಘವೇಂದ್ರ ಗೋವಿಂದ ನಾಯ್ಕ ಬೈಕ್ ಓಡಿಸುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಇಳಸೂರಿನ ಬಳಿ ಬೈಕಿಗೆ ತನ್ನ ಕಾರು ಗುದ್ದಿ ಪರಾರಿಯಾಗಿದ್ದಾನೆ. ಇದರಿಂದ ಬೈಕಿನಲ್ಲಿದ್ದ ರಾಘವೇಂದ್ರ ನಾಯ್ಕ ತೊಡೆ ಹಾಗೂ ಕಾಲಿಗೆ ಗಾಯವಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದು ಗಾಯಗೊಂಡರೂ ಆತನನ್ನು ಆಸ್ಪತ್ರೆಗೆ ಸೇರಿಸಿಲ್ಲ. ಪೊಲೀಸ್ ಠಾಣೆಗೆ ಸಹ ಮಾಹಿತಿ ನೀಡಿಲ್ಲ.
ಈ ವೇಳೆ ಅಪಘಾತಕ್ಕೆ ಕಾರಣನಾದ ಕಾರಿನ ನೊಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡ ಗೋವಿಂದ ಪೂಜಾರಿ ಆ ಕಾರು ಹಾಗೂ ಕಾರಿನ ಚಾಲಕನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಗ್ರಾಮೀಣ ಠಾಣೆಗೆ ತೆರಳಿ ದೂರು ದಾಖಲಿಸಿದರು.




