ಶಿರಸಿ: ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಹಾರುಗಾರದ ಭಾಸ್ಕರ ಜೋಗಿ ಅವರ ಜೊತೆ ಜೊತೆ ಪತ್ನಿ ಸುಮಿತಾ ಅವರು ಜಗಳ ಮಾಡಿಕೊಂಡು ತವರು ಮನೆ ಸೇರಿದ್ದರು. ಪತ್ನಿ ನೆನಪಿನಲ್ಲಿ ವಿಪರೀತ ಸರಾಯಿ ಚಟ ಅಂಟಿಸಿಕೊoಡ ಭಾಸ್ಕರ್ ಜೋಗಿ ವಿಷ ಸೇವಿಸಿ ಸಾವನಪ್ಪಿದ್ದಾರೆ.
ಊರತೋಟ ಗೋರಗದ್ದೆ ಬಳಿಯ ಹಾರುಗಾರದ ಭಾಸ್ಕರ ಸುಬ್ಬಾ ಜೋಗಿ (38) ಕೂಲಿ ಕೆಲಸ ಮಾಡಿಕೊಂಡಿದ್ದರು. ಕೂಲಿ ಹಣವನ್ನು ತಮ್ಮ ವ್ಯಸನಕ್ಕೆ ಬಳಸುತ್ತಿದ್ದರು. ಇದರಿಂದ ಬೇಸತ್ತ ಅವರ ಪತ್ನಿ ಸುಮಿತಾ ಮಕ್ಕಳ ಜೊತೆ ತವರು ಮನೆ ಸೇರಿದ್ದರು. ಭಾಸ್ಕರ ಮನವೊಲೈಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಇದರಿಂದ ಬೇಸತ್ತ ಭಾಸ್ಕರ ಮದ್ಯ ಸೇವನೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರು. ಯಾವಾಗಲೂ ಪತ್ನಿ ನೆನಪಿನಲ್ಲಿ ನಶೆಯ ಗುಂಗಿನಲ್ಲಿರುತ್ತಿದ್ದರು. ಅಕ್ಟೊಬರ್ 29ರಂದು ಭಾಸ್ಕರ್ ಅನಾರೋಗ್ಯಕ್ಕೆ ಒಳಗಾಗಿದ್ದು, ಪರಿಶೀಲಿಸಿದಾಗ ಅವರು ಕೀಟನಾಶಕ ಸೇವಿಸಿರುವುದು ಅರಿವಿಗೆ ಬಂದಿತ್ತು. ಕೂಡಲೇ ಅವರನ್ನು ಸಂಬoಧಿಕರು ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದರು.
ಆದರೆ, ಭಾಸ್ಕರ ಜೋಗಿ ಅವರನ್ನು ಕುಟುಂಬದವರು ಬೇರೆ ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಮರಳಿ ಮನೆಗೆ ಕರೆತಂದು ಅಲ್ಲಿಯೇ ಉಪಚರಿಸಿದ್ದರು. ಅಕ್ಟೊಬರ್ 31ರ ಬೆಳಗ್ಗೆ ಭಾಸ್ಕರ್ ಇನ್ನಷ್ಟು ಅಸ್ವಸ್ಥರಾಗಿದ್ದು, ಮತ್ತೆ ಅವರನ್ನು ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪರೀಕ್ಷಿಸಿದ ವೈದ್ಯರು ಭಾಸ್ಕರ್ ಜೋಗಿ ಈಗಾಗಲೇ ಸಾವನಪ್ಪಿದ ಬಗ್ಗೆ ಘೋಷಿಸಿದರು. ಅವರ ತಮ್ಮ ಮಾದೇವ ಜೋಗಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.




