ಶ್ರೀಗಳ ಹಿತವಚನ, ಸಾಧಕರಿಗೆ ಸನ್ಮಾನ, ಭಗವದ್ಗೀತಾ ಅಭಿಯಾನ, ಭಜನೆ, ತಾಳಮದ್ಧಲೆ, ಗಮಕ ವಾಚನ, ನೃತ್ಯ ರೂಪಕ, ಯೋಗ ನೃತ್ಯ, ಭರತ ನಾಟ್ಯ, ಭಕ್ತಿ ಸಂಗೀತ ಜೊತೆಗೆ ಯಕ್ಷಗಾನ… ಒಂದೇ ವೇದಿಕೆಯಲ್ಲಿ ಈ ಎಲ್ಲವನ್ನು ಆಹ್ವಾದಿಸಬೇಕು ಎಂದರೆ ಸಂಕಲ್ಪ ಉತ್ಸವಕ್ಕೆ ಬರಬೇಕು!
ನವೆಂಬರ್ 1ರಿಂದ ಯಲ್ಲಾಪುರದ ಗಾಂಧೀ ಕುಟೀರದಲ್ಲಿ ಸಂಕಲ್ಪ ಉತ್ಸವ ನಡೆಯಲಿದೆ. ಸಂಜೆ 4.30ರಿಂದ ಬಗೆ ಬಗೆಯ ಕಾರ್ಯಕ್ರಮಗಳು ಶುರುವಾಗಲಿದೆ. ಇದಕ್ಕೆ ಎಲ್ಲಾ ಬಗೆಯ ಸಿದ್ಧತೆಗಳು ನಡೆದಿದ್ದು, ನಾವು-ನೀವು ಬರುವುದು ಮಾತ್ರ ಬಾಕಿ. ನಮ್ಮೆಲ್ಲರ ಬರುವಿಕೆಗಾಗಿ ಪ್ರಮೋದ ಹೆಗಡೆ ಕಾಯುತ್ತಿದ್ದಾರೆ. ಅವರ ಪುತ್ರ ಪ್ರಸಾದ ಹೆಗಡೆ ಹಾಗೂ ಪ್ರಶಾಂತ ಹೆಗಡೆ ಸ್ವಾಗತಕ್ಕೆ ನಿಂತಿದ್ದಾರೆ.
ಸಾಂಸ್ಕೃತಿಕ ರಾಯಬಾರಿ ಎಂದೇ ಹೆಸರು ಪಡೆದಿರುವ ಪ್ರಮೋದ ಹೆಗಡೆ ಕಳೆದ 37 ವರ್ಷಗಳಿಂದ ಸಂಕಲ್ಪ ಉತ್ಸವ ಸಂಘಟಿಸುತ್ತಿದ್ದಾರೆ. ಮೂರು ದಶಕಗಳಿಂದ ವಿವಿಧ ನೆಲೆಯಲ್ಲಿ ನಾಡು-ನುಡಿಯ ಸೇವೆ ಸಲ್ಲಿಸುತ್ತಿರುವ ಸಂಕಲ್ಪ ಸಂಸ್ಥೆ 38ನೇ ಸಂಕಲ್ಪ ಉತ್ಸವಕ್ಕೆ ಸಜ್ಜಾಗಿದೆ. ನ 1ರಿಂದ ನಾಲ್ಕು ದಿನಗಳ ಕಾಲ ಈ ಸಲ ಉತ್ಸವ ಸಂಘಟಿಸಲಾಗಿದೆ.
ಮೊದಲಿನಿoದಲೂ ಸಂಕಲ್ಪ ವೈವಿಧ್ಯತೆಯ ನೆಲೆಯಲ್ಲಿ ಬೆಳೆದು ಬಂದಿರುವ ಸಂಸ್ಥೆ. ಮೌನ ಗೃಂಥಾಲಯ ಆರಂಭಿಸಿ, ಜ್ಞಾನದ ಬೆಳಕು ಹಚ್ಚಿಕೊಟ್ಟ ಶ್ರೇಯಸ್ಸು ಸಂಕಲ್ಪ ಸಂಸ್ಥೆಯದ್ದಾಗಿದೆ. ಇಲ್ಲಿ ಯಕ್ಷಗಾನ ತರಬೇತಿ ಶಿಬಿರ, ಕಸೂತಿ, ಕರಕುಶಲ ತಯಾರಿಸುವ ಕೌಶಲ್ಯದ ಪಾಠ, ವ್ಯಾಯಾಮ ಶಾಲೆ, ಒಳಾಂಗಣ ಕ್ರೀಡೆ, ರಾಮಕೃಷ್ಣ ಹೆಗಡೆ ನೆನಪಿನಲ್ಲಿ ಉಚಿತ ಆರೋಗ್ಯ ಶಿಬಿರ, ಕಣ್ಣಿನ ಪೊರೆ ತಪಾಸಣಾ ಶಿಬಿರ, ಫೊಟೊಗ್ರಾಫಿ ಶಿಬಿರ, ಚಿತ್ರಕಲಾ ಶಿಬಿರ, ಚಾರಣ, ಪ್ರಾತ್ಯಕ್ಷಿಕೆ, ವಿವಿಧ ಗೋಷ್ಠಿ, ವಿಚಾರ ಸಂಕಿರಣ ಹೀಗೆ ನಡೆದ ಕಾರ್ಯಕ್ರಮಗಳು ಒಂದೆರಡಲ್ಲ.
ಮಲೆನಾಡಿನಲ್ಲಿ ಸಾಂಸ್ಕೃತಿಕತೆಯ ಕಿಚ್ಚು ಹಬ್ಬಿಸಿ, ಸಾವಿರಾರು ಪ್ರೇಕ್ಷಕರು ನಿದ್ದೆಬಿಟ್ಟು ಜಾಗರಣೆಯ ಮೂಲಕ ಕಲೆಯ ಆರಾಧನೆ, ನುಡಿಯ ಹಬ್ಬದ ಸೊಬಗು, ಸೊಗಸನ್ನು ಕಣ್ತುಂಬಿಕೊಳ್ಳಲು ಕಾತರತೆಯಿಂದ ಕಾಯುವಂತೆ ಮಾಡಿರುವ ಪರಿ ದೊಡ್ಡ ತಪ್ಪಸ್ಸು. ಸಾವಿರಕ್ಕೂ ಅಧಿಕ ಪ್ರತಿಭೆಗಳು ಈ ವೇದಿಕೆಯಲ್ಲಿ ಅನಾವರಣಗೊಂಡಿವೆ. ಬುಡಕಟ್ಟು ಉತ್ಸವ, ಆದಿವಾಸಿ ಕಲಾಮೇಳ, ನಾಟಕ ತರಬೇತಿ, ಯಕ್ಷಗಾನ- ಜಾನಪದ ವಿಚಾರ ಸಂಕೀರ್ಣ, ತಾಳಮದ್ದಲೆ ಸಪ್ತಾಹ, ಯಕ್ಷಗಾನ ಸಪ್ತಾಹ, ದೊಂದಿ ಬೆಳಕಿನಲ್ಲಿ ಯಕ್ಷಗಾನ, ಕೃಷಿ, ಸಾಹಿತ್ಯ ವಿಚಾರ ಸಂಕಿರಣ, ಸಂಕಲ್ಪದ ಕೀರ್ತಿ ಹೆಚ್ಚಿಸಿದೆ. 24 ಗಂಟೆಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ದಾಖಲೆಯೂ ಸಂಕಲ್ಪಕ್ಕಿದೆ.




