ಯಲ್ಲಾಪುರ: ಶಿರಸಿಯ ವೈದ್ಯ ಸತೀಶ ಬಸವರಾಜ (44) ಅವರ ಕಾರಿಗೆ ಕೆರೆಗದ್ದೆಯ ನಾರಾಯಣ ಗಣಪತಿ ಗೌಡ (35) ಎಂಬಾತರು ಬೈಕ್ ಗುದ್ದಿದ್ದಾರೆ.
ಸತೀಶ್ ಅವರು ಶಿರಸಿ ಬಳಿಯ ಚಿಪಗಿಯ ಡ್ರೀಮ್ ಪಾರ್ಕ ಲೇಔಟ್’ನಲ್ಲಿ ವಾಸವಾಗಿದ್ದಾರೆ. ನಾರಾಯಣ ಗೌಡ ಅವರು ಶಿರಸಿ ಕುಳವೆ ಕೆರೆಗದ್ದೆಯವರು. ಅಕ್ಟೊಬರ್ 31ರಂದು ಸಂಜೆ 7.30ಕ್ಕೆ ಸತೀಶ ಅವರು ಯಲ್ಲಾಪುರದಿಂದ ಶಿರಸಿ ಕಡೆ ಕಾರು ಓಡಿಸುತ್ತಿದ್ದರು. ಉಮ್ಮಚ್ಗಿ ಹಡ್ಲಕೇರಿ ಕ್ರಾಸಿನ ಎದುರಿನಿಂದ ಬೈಕ್ ಓಡಿಸಿಕೊಂಡು ಬಂದ ನಾರಾಯಣ ಗೌಡ ಕಾರಿಗೆ ಡಿಕ್ಕಿ ಹೊಡೆದರು.
ಡಿಕ್ಕಿ ರಭಸಕ್ಕೆ ಬೈಕ್ ಸವಾರ ನಾರಾಯಣ ಗೌಡ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಎರಡು ವಾಹನ ಜಖಂ ಆಗಿದೆ. ವೈದ್ಯರು ಕಾರಿನಿಂದ ಇಳಿದು ಬೈಕ್ ಸವಾರನಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿದರು. ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.




