ಯಲ್ಲಾಪುರ: ರೈತರ ಭೂಮಿಯನ್ನು ವಕ್ಟ್ ಬೋರ್ಡ ಹೆಸರಿಗೆ ಬರೆದ ಸರ್ಕಾರದ ನಿಲುವು ಖಂಡಿಸಿ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ವಿವಿಧ ಹಿಂದೂ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂತ್ವದ ರಕ್ಷಣೆಗೆ ಕಾಂಗ್ರೆಸ್-ಜೆಡಿಎಸ್ ಸೇರಿ ಯಾವುದೇ ಪಕ್ಷ ಹೋರಾಟ ನಡೆಸಿದರೂ ಅದಕ್ಕೆ ಬೆಂಬಲ ನೀಡುವುದಾಗಿ ಸಂಘಟನೆ ಪ್ರಮುಖರು ಘೋಷಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್,ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕಿಸಾನ್ ಸಂಘ ಹಾಗೂ ಮಾತೃ ಮಂಡಳದವರು ಈ ಬಗ್ಗೆ ಭಾನುವಾರ ಶಕ್ತಿ ಗಣಪತಿ ದೇವಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದು, `ವಕ್ಟ್ ಬೋರ್ಡಿನಿಂದ ಮೊದಲು ಕೃಷಿ ಭೂಮಿಗಳ ಮೇಲೆ ಆಕ್ರಮಣ ನಡೆದಿದ್ದು, ಇದೀಗ ಮಠ ಮಾನ್ಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಹಿಂದೂಸ್ಥಾನವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ ಇಲ್ಲಿ ಅಡಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ವಿಜಯಪುರ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವು ಕಡೆ ಕೃಷಿಕರ ಹಾಗೂ ದೇವಾಲಯಗಳ ಭೂಮಿಯ ಮೇಲೆ ವಕ್ಟ ಬೋರ್ಡ ತನ್ನ ಹೆಸರು ದಾಖಲಿಸಿದೆ. 12ನೇ ಶತಮಾನದ ಹಿಂದೂ ದೇವಾಲಯದ ಮೇಲೆ ಸಹ ಹಕ್ಕು ಸಾಧಿಸಲು ಹೊರಟಿದೆ. ವಕ್ಟ್ ಬೋರ್ಡ ಅಸ್ತಿತ್ವವನ್ನು ಸರ್ಕಾರ ರದ್ದು ಮಾಡಬೇಕು’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದರು.
`ಹಿಂದೂ ದೇವಾಲಯಗಳ ರಕ್ಷಣೆಗೆ ಸೂಕ್ತ ಕಾನೂನುಗಳಿಲ್ಲ. ದೇವಾಲಯ ನಿರ್ವಹಣೆ ಮಾತ್ರ ಸಮಿತಿಗೆ ನೀಡಲಾಗಿದ್ದು, ಅಭಿವೃದ್ಧಿಗೆ ಸರ್ಕಾರ ಅನುಮತಿ ಪಡೆಯಬೇಕು. ಆದರೆ, ವಕ್ಟ್ ಬೋರ್ಡಿಗೆ ಅದ್ಯಾವ ನಿಯಮಗಳು ಅನ್ವಯಿಸುವುದಿಲ್ಲ. ಈ ಬಗೆಯ ಕಾನೂನುಗಳಿಂದ ಹಿಂದೂಗಳ ಸಾಂಸ್ಕೃತಿಕ ಸ್ವತ್ತಿಗೆ ಧಕ್ಕೆಯಾಗುತ್ತಿದೆ’ ಎಂದು ವಿವರಿಸಿದರು.
`ಸಚಿವ ಜಮೀರ ಅಹ್ಮದ್ ಒತ್ತಡದಿಂದ ಜಿಲ್ಲಾಧಿಕಾರಿಗಳು ಬೇರೆಯವರ ಭೂಮಿಯನ್ನು ವಕ್ಟ್ ಬೋರ್ಡಿನ ಹೆಸರಿಗೆ ದಾಖಲು ಮಾಡುತ್ತಿದ್ದಾರೆ. ರೈತರ ಭೂಮಿಯಲ್ಲಿ ಅನ್ಯರ ಹೆಸರು ದಾಖಲಾಗಿರುವುದನ್ನು ಕೂಡಲೇ ತೆಗೆಯಬೇಕು’ ಎಂದು ಒತ್ತಾಯಿಸಿದರು. ವಿವಿಧ ಹಿಂದೂ ಸಂಘಟನೆ ಪ್ರಮುಖರಾದ ಗಜಾನನ ನಾಯ್ಕ, ಅನಂತ ಗಂವ್ಕರ, ಶ್ಯಾಮಲಿ ಪಾಠಣಕರ ಇತರರು ಇದ್ದರು.





