ಹಳಿಯಾಳ: ಗೌಂಡಿ, ಕೂಲಿ ಕಾರ್ಮಿಕ, ಕೃಷಿಕರೆಲ್ಲ ಸೇರಿ ಅಂದರ್ ಬಾಹರ್ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರನ್ನು ಕಂಡು ಮೂವರು ಓಡಿ ಪರಾರಿಯಾಗಿದ್ದಾರೆ.
ನವೆಂಬರ್ 2ರಂದು ಮಧ್ಯಾಹ್ನ ಹುಣ್ಸವಾಡ ಗ್ರಾಮದ ಮಾರುತಿ ನಾರಾಯಣ ಮಡಿವಾಳ ತನ್ನ ಸಹಚರರನ್ನು ಇಸ್ಪಿಟ್ ಆಟಕ್ಕೆ ಆಮಂತ್ರಿಸಿದ್ದ. ಮಾರುತಿಗಲ್ಲಿ ಕಾಂಕ್ರೆಟ್ ರಸ್ತೆ ಮೇಲೆ ಗಂಗಾರಾಮ ಫಕೀರ ಮಡಿವಾಳ, ಪುಂಡಳಿಕ ಶಂಕರ್ ಬಂಡಾರಿ, ಬಸವರಾಜ ಭರಮಣಿ ಮಡಿವಾಳ, ಲಕ್ಷ್ಮಣ ಈರಪ್ಪ ರೇಡಕರ್, ನಾಗೇಶ ಭೀಮರಾವ್ ಮೇತ್ರಿ, ದಯಾನಂದ ಮಾರುತಿ ಭಂಡಾರಿ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ರಸ್ತೆ ಮೇಲೆ ಕೂತು ಅವರು ಇಸ್ಪಿಟ್ ಆಡಿದರೂ ಯಾರೂ ಕೇಳುವವರಿರಲಿಲ್ಲ.
ಪಿಎಸ್ಐ ವಿನೋದ ಎಸ್ ಕೆ ಅಲ್ಲಿಗೆ ತೆರಳಿ ಹಣಕಟ್ಟಿ ಜೂಜಾಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದರು. ತಮ್ಮ ತಂಡದವರೊoದಿಗೆ ಅವರು ದಾಳಿ ಮಾಡಿದಾಗ ನಾಲ್ವರು ಸಿಕ್ಕಿಬಿದ್ದರು. ಪೊಲೀಸರನ್ನು ಕಂಡ ಲಕ್ಷ್ಮಣ ಈರಪ್ಪ ರೇಡಕರ್, ನಾಗೇಶ ಭೀಮರಾವ್ ಮೇತ್ರಿ, ದಯಾನಂದ ಮಾರುತಿ ಭಂಡಾರಿ ಓಡಿ ಹೋಗಿ ತಪ್ಪಿಸಿಕೊಂಡರು.
ಅಡ್ಡೆಯಲ್ಲಿ ಹರಡಿಕೊಂಡಿದ್ದ 1050ರೂ ಹಣ, ಇಸ್ಪಿಟ್ ಎಲೆಗಳಂಥ ಸಾಮಗ್ರಿಗಳನ್ನು ವಶಪಡಿಸಿಕೊಂಡ ಪೊಲೀಸರು ಓಡಿ ಹೋದವರನ್ನು ಸೇರಿ ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡರು.





