ಕುಮಟಾ: ಅನಾಮದೇಯ ಪತ್ರಗಳ ಒತ್ತಡಕ್ಕೆ ಮಣಿದ ಲೋಕಾಯುಕ್ತರು ಗೋಕರ್ಣ ಗ್ರಾ ಪಂ ಕಚೇರಿಗೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಕಡತಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಅವರ ಅನಿರೀಕ್ಷಿತ ಆಗಮನದಿಂದ ಅಲ್ಲಿನ ಅಧಿಕಾರಿ-ಸಿಬ್ಬಂದಿ ಕಂಗಾಲಾದರು. ಉದ್ಯೋಗ ಖಾತ್ರಿ ಹಾಗೂ 15ನೇ ಹಣಕಾಸು ಯೋಜನೆ ಅಡಿ ಕೈಗೊಂಡ ಕಾಮಗಾರಿಗಳ ದಾಖಲೆಗಳನ್ನು ಅವರು ಪರಿಶೀಲಿಸಿದರು. ಅನುಮಾನಾಸ್ಪದ ಕಡತಗಳ ಬಗ್ಗೆ ಅವರು ಮಾಹಿತಿ ಕೇಳಿದಾಗ ಅಧಿಕಾರಿಗಳು ತಬ್ಬಿಬ್ಬಾದರು. `ಮುಂದಿನ ಬಾರಿ ತಾವು ಭೇಟಿ ನೀಡುವ ಒಳಗೆ ಎಲ್ಲಾ ಕಡತಗಳನ್ನು ಸರಿಯಾಗಿ ನಿರ್ವಹಿಸಿಡಬೇಕು’ ಎಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು. `ಲೋಪಗಳು ಹೀಗೆ ಮುಂದುವರೆದರೆ ಪ್ರಕರಣ ದಾಖಲಿಸುವೆ’ ಎಂದು ಎಚ್ಚರಿಸಿದರು.
ಈ ಹಿಂದೆ ಲೋಕಾಯುಕ್ತರು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ಸರಿಯಾಗಿ ನಿರ್ವಹಿಸಲು ಸೂಚಿಸಿದ್ದರು. ಬುಧವಾರ ಅದರ ಪಾಲನಾ ವರದಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನೂ ಹೊಲಸು ನೀರು ತುಂಬಿರುವ ಸಂಗಮ ನಾಲಾಗೆ ಭೇಟಿ ನೀಡಿದ ಅವರು `ಇದಕ್ಕೆ ಕಾರಣರಾದವರ ಮೇಲೆ ಕೈಗೊಂಡ ಕ್ರಮ ಏನು?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುವಲ್ಲಿ ಗ್ರಾ ಪಂ ಅಧಿಕಾರಿಗಳು ವಿಫಲರಾದರು.
ಗ್ರಾ ಪಂ ಸದಸ್ಯ ಗಣಪತಿ ನಾಯ್ಕ ಕಸ ವಿಲೇವಾರಿ ಘಟಕದಲ್ಲಿನ ಅವ್ಯವಹಾರದ ಬಗ್ಗೆ ದೂರಿದರು. `ಸಾರ್ವಜನಿಕರ ದೂರು ಆಧರಿಸಿ ಹಲವು ಕಡೆ ಭೇಟಿ ನೀಡಿದ್ದು, ಲೋಪದೋಷಗಳ ಕುರಿತು ನೋಟಿಸ್ ನೀಡಲಾಗುತ್ತದೆ. ಹಲವು ಸರ್ಕಾರಿ ಕಚೇರಿಯಲ್ಲಿ ಲಂಚ ಪಡೆಯುವ ಬಗ್ಗೆ ಜನ ಆರೋಪಿಸಿದ್ದು, ಅಧಿಕೃತ ದಾಖಲೆಗಳೊಂದಿಗೆ ದೂರಿದವರಿಲ್ಲ. ಅಧಿಕೃತ ದೂರು ಬಂದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಂದು ತಿಳಿಸಿದರು.




