ಶಿರಸಿ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಹಾಕಿದ ಬೆಂಕಿ ಮಹಿಳೆಯನ್ನು ಬಲಿ ಪಡೆದಿದೆ.
ಶಿರಸಿ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆ ಗಂಗೆ ಗೌಡ (55) ಅವರು ನ 7ರ ಬೆಳಗ್ಗೆ 9.30ಕ್ಕೆ ಬಚ್ಚಲು ಮನೆಗೆ ಬೆಂಕಿ ಹಾಕಲು ಹೋಗಿದ್ದರು. ಅಬ್ಬಿ ಒಲೆಗೆ ಪೆಟ್ರೋಲ್ ಸುರಿದ ಅವರು ಲೈಟರ್’ನಿಂದ ಬೆಂಕಿ ಹಚ್ಚಿದ್ದರು. ಒಲೆಗೆ ಸುರಿದ ಪೆಟ್ರೋಲ್ ಅವರಿಗೆ ಅರಿವಿಲ್ಲದಂತೆ ಮೈಮೇಲೆ ಇದ್ದ ಬಟ್ಟೆಗೆ ತಾಗಿದ್ದು, ಬೆಂಕಿಯ ಜ್ವಾಲೆ ಬಟ್ಟೆಗೂ ವ್ಯಾಪಿಸಿತು. ಇದರಿಂದ ಬಟ್ಟೆಯೊಂದಿಗೆ ಗಂಗೆ ಬಂಗಾರ್ಯ ಗೌಡ ಸಹ ಉರಿದರು. ಕೈಯಲ್ಲಿದ್ದ ಪೆಟ್ರೋಲ್ ಬಾಟಲಿ ಸಹ ಈ ವೇಳೆ ಸ್ಪೋಟಗೊಂಡು ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಸುಟ್ಟು ಗಾಯಗೊಂಡಿದ್ದ ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಗಂಗೆ ಗೌಡರನ್ನು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಸಹ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಶಿಫಾರಸ್ಸು ಮಾಡಿದ್ದು, ಮಂಗಳೂರಿಗೆ ಕರೆದೊಯ್ದಾಗ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ಸಹ `ಬದುಕಿಸಿಕೊಳ್ಳುವುದು ಕಷ್ಟ’ ಎಂದು ಹೇಳಿದರು. ಹೀಗಾಗಿ ನ 8ರ ರಾತ್ರಿ 1.30ಕ್ಕೆ ಮಂಗಳೂರಿನಿoದ ಶಿರಸಿಗೆ ಗಂಗೆ ಗೌಡರನ್ನು ಕರೆತರಬೇಕಾದರೆ ಅವರು ಸಾವನಪ್ಪಿದರು.
ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಗಂಗೆ ಗೌಡ ಅವರು ಸಾವವಪ್ಪಿರುವುದನ್ನು ಖಚಿತಪಡಿಸಿದ್ದು, ಗಂಗೆ ಅವರ ಪತಿ ಬಂಗಾರ್ಯ ಮಂಜಾ ಗೌಡ ಪೊಲೀಸ್ ಪ್ರಕರಣ ದಾಖಲಿಸಿ ಶವ ಬಿಡಿಸಿಕೊಂಡರು.




