ಯಲ್ಲಾಪುರ: ಮನೆ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್’ಗೆ ಅನುದಾನ ನೀಡಿಲ್ಲ. ಹೀಗಾಗಿ ಇಲ್ಲಿನ ನೌಕರರಿಗೆ ದೀಪಾವಳಿ ಕಾಸು ಸಿಕ್ಕಿಲ್ಲ. 10 ತಿಂಗಳಿನಿoದ ವೇತನವೂ ಆಗಿಲ್ಲ. ಇದೀಗ ವಿದ್ಯುತ್ ಬಿಲ್ ಪಾವತಿಗೂ ಗುತ್ತಿಗೆದಾರರ ಬಳಿ ಕಾಸಿಲ್ಲ!
ಶುಕ್ರವಾರ ಸಂಜೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಬಾಕಿ ಹಿನ್ನಲೆ ಇಂದಿರಾ ಕ್ಯಾಂಟೀನ್’ನ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಹೀಗಾಗಿ ಶನಿವಾರ ಬೆಳಗ್ಗೆ ಇಡ್ಲಿ ಮಾಡಲು ಸಾಧ್ಯವಾಗಿಲ್ಲ. ಅದಾಗಿಯೂ, ಅಡುಗೆ ಸಿಬ್ಬಂದಿ ಶನಿವಾರ ಉಪ್ಪಿಟ್ಟು ಮಾಡಿ ಬಡಿಸಿದರು. ಮಧ್ಯಾಹ್ನ ಊಟಕ್ಕೆ ಮಸಾಲೆ ಅರೆಯಲು ವಿದ್ಯುತ್ ಇಲ್ಲದ ಕಾರಣ ಬೇಳೆ ಸಾರು ಮಾಡುವ ಬಗ್ಗೆ ನಿರ್ಧರಿಸಿದರು. ವಿದ್ಯುತ್ ಸಂಪರ್ಕ ಮರುಜೋಡಣೆ ಆಗದೇ ಇದ್ದಲ್ಲಿ ರಾತ್ರಿ ಊಟ ಸ್ಥಗಿತವಾಗುವ ಸಾಧ್ಯತೆಗಳಿದೆ.
ಯಲ್ಲಾಪುರದ ಇಂದಿರಾ ಕ್ಯಾಟೀನ್’ನಲ್ಲಿ ಪ್ರತಿ ಹೊತ್ತು 100ಕ್ಕೂ ಅಧಿಕ ಜನ ಆಹಾರ ಸೇವಿಸುತ್ತಾರೆ. ಮೂರು ಹೊತ್ತು ಇಲ್ಲಿ ಬರುವವರು ಬೇರೆ ಬೇರೆ ವ್ಯಕ್ತಿಗಳಾಗಿದ್ದು, ಭಾನುವಾರ ಆಹಾರ ಸೇವಿಸುವವರ ಪ್ರಮಾಣ ಹೆಚ್ಚು. ವಿದ್ಯುತ್ ಇಲ್ಲದ ಕಾರಣ ಅವರೆಲ್ಲರೂ ಇದೀಗ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಸಿಬ್ಬಂದಿಗೆ ದೀಪಾವಳಿ ಹಬ್ಬಕ್ಕೂ ಸಂಬಳ ಆಗದ ಕಾರಣ ಕ್ಯಾಂಟೀನ್ ಕೆಲಸಗಾರರು ಹಬ್ಬವನ್ನು ಖುಷಿಯಿಂದ ಆಚರಿಸಲು ಸಾಧ್ಯವಾಗಿಲ್ಲ.
`ಅಗಸ್ಟ್ ತಿಂಗಳಿನಲ್ಲಿ ಎಲ್ಲಾ ಬಾಕಿ ಪಾವತಿಸಲಾಗಿದ್ದು, ಅದಾದ ನಂತರ ಅನುದಾನ ಬಂದಿರಲಿಲ್ಲ. ಹೀಗಾಗಿ ಸಮಸ್ಯೆ ಆಗಿದೆ. ಬಿಲ್ ಪಾವತಿಯ ಕಡತ ಜಿಲ್ಲಾಧಿಕಾರಿಗಳ ಟೇಬಲ್ ಮೇಲಿದ್ದು, ಅವರ ಸಹಿ ಆದ ನಂತರ ಹಣ ಸಿಗಲಿದೆ. ಮುಂದಿನ ವಾರ ಸಿಬ್ಬಂದಿ ವೇತನದ ಜೊತೆ ಎಲ್ಲಾ ಬಿಲ್ ಪಾವತಿ ಸಾಧ್ಯ’ ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ರಂಜನ್ ಶೆಟ್ಟಿ ಹೇಳಿದ್ದಾರೆ.
`10400ರೂ ಬಿಲ್ ಬಾಕಿ ಹಿನ್ನಲೆ ಕ್ಯಾಂಟೀನ್ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಜನರ ಒತ್ತಾಯದ ಮೇರೆಗೆ ಪ್ರಸ್ತುತ ಮರುಸಂಪರ್ಕ ನೀಡುವ ಬಗ್ಗೆ ಚಿಂತಿಸಲಾಗಿದೆ. ಅದಾಗಿಯೂ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಲ್ಲಿ ಕಠಿಣ ಕ್ರಮ ಅನಿವಾರ್ಯ’ ಎಂದು ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ ತಿಳಿಸಿದರು.
#S News Digitel Advertisement: ಗುಣಮಟ್ಟದ ಊಟಕ್ಕಾಗಿ ಭೇಟಿ ಕೊಡಿ: ಶ್ರೀಬಸವೇಶ್ವರ ರೊಟ್ಟಿ ಖಾನಾವಳಿ ಫೋ: 9741510408




