ಹಳಿಯಾಳ: ಹೊಟೇಲ್ ಕೆಲಸ ಕೇಳಿಕೊಂಡು ಬಂದಿದ್ದ ಅಪರಿಚಿತ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದರಿಂದ ಆತನ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿದೆ. `ಈ ಸಾವಿನ ಸಮಗ್ರ ತನಿಖೆ ನಡೆಯಬೇಕು’ ಎಂದು ಹೊಟೇಲ್ ಮಾಲಕ ಹನುಮಂತ ಬೋವಿ ಪೊಲೀಸ್ ದೂರು ನೀಡಿದ್ದಾರೆ.
ಹನುಮಂತ ಬೋವಿ ಹಳಿಯಾಳ ಸಕ್ಕರೆ ಕಾರ್ಖಾನೆ ಬಳಿ `ಜೈ ಹನುಮಾನ್’ ಎಂಬ ಹೊಟೇಲ್ ಹೊಂದಿದ್ದಾರೆ. ನ 6ರ ಸಂಜೆ ಅಂದಾಜು 35 ವರ್ಷದ ವ್ಯಕ್ತಿ ಅವರಲ್ಲಿಗೆ ಬಂದು `ಏನಾದರೂ ಕೆಲಸ ಕೊಡಿ’ ಎಂದು ಕೇಳಿದ್ದಾನೆ. ಆಗ, ಹನುಮಂತ ಬೋವಿ `ಇಲ್ಲಿ ಕೆಲಸ ಖಾಲಿ ಇಲ್ಲ’ ಎಂದಿದ್ದಾರೆ.
ಆ ದಿನ ರಾತ್ರಿ ಹೊಟೇಲ್ ಕಟ್ಟೆಯ ಮೇಲೆ ಮಲಗಿದ್ದ ಅಪರಿಚಿತ ಮರುದಿನ ಬೆಳಗ್ಗೆ ಎದ್ದು ಮುಖ ತೊಳೆಯುವುದಕ್ಕಾಗಿ ಹೊಟೇಲ್’ನ ಜಗ್ಗನ್ನು ಪಡೆದಿದ್ದಾನೆ. ಮುಖ ತೊಳೆಯುವ ವೇಳೆ ಆತ ಏಕಾಏಕಿ ಕುಸಿದು ಬಿದ್ದಿದ್ದರಿಂದ ಹನುಮಂತ ಬೋವಿ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಆತನನ್ನು ಕರೆದೊಯ್ದರು.
ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ನ 7ರ ಸಂಜೆ 7.30ಕ್ಕೆ ಸಾವನಪ್ಪಿದ್ದು, ಆತನ ಶವ ಆಸ್ಪತ್ರೆಯಲ್ಲಿದೆ. ನ 7ರ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿದ ಹನುಮಂತ ಬೋವಿ ನ 8ರಂದು ಹಳಿಯಾಳಕ್ಕೆ ಆಗಮಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. `ಆತನ ಸಾವಿನ ಬಗ್ಗೆ ಅನುಮಾನವಿದ್ದು, ಆತ ಯಾರು? ಎಲ್ಲಿಯವ? ಎಂದು ಮೊದಲು ಕಂಡು ಹಿಡಿಯಬೇಕು. ವಾರಸುದಾರರಿಗೆ ಶವ ಹಸ್ತಾಂತರಿಸುವ ಜೊತೆ ಸಾವಿನ ತನಿಖೆ ನಡೆಯಬೇಕು’ ಎಂದು ಹನುಮಂತ ಬೋವಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.




