ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು’ ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.
ಬಾಬು ಪಗಡೆ ಅವರು ಜೆ.ಎನ್.ಎನ್ ರಸ್ತೆಯಲ್ಲಿ `ವೆಂಕಟೇಶ್ ಟೈಲರ್’ ಎಂಬ ಮಳಿಗೆ ನಡೆಸುತ್ತಾರೆ. ಬಟ್ಟೆ ಹೊಲಿದು ಜೀವನ ನಡೆಸುವ ಅವರು ರೆಡ್ಮಿ ಮೊಬೈಲ್ ಹೊಂದಿದ್ದರು. ಶುಕ್ರವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಬಳಿ ಬಂದು `ತುರ್ತಾಗಿ ಫೋನ್ ಮಾಡಬೇಕು. ಮೊಬೈಲ್ ಕೊಡಿ’ ಎಂದು ಬೇಡಿದ್ದಾನೆ. ಅನುಕಂಪದ ಆಧಾರದಲ್ಲಿ ಬಾಬು ಅವರು ಮೊಬೈಲ್ ಕೊಟ್ಟಿದ್ದಾರೆ.
ಫೋನ್ ಪಡೆದ ಆತ ಮಾತನಾಡಿದಂತೆ ನಟಿಸುತ್ತಲೇ ಅಲ್ಲಿಂದ ಪರಾರಿಯಾಗಿದ್ದು, ಬಾಬು ಅವರು ಅಂಗಡಿಯಿoದ ಹೊರಬಂದು ಹುಡುಕಿದರೂ ಆತನ ಸುಳಿವು ಸಿಕ್ಕಿಲ್ಲ. ಆ ಯುವಕನ ಹೆಸರು ಗೊತ್ತಿಲ್ಲ. ವಿಳಾಸವೂ ಅರಿವಿಲ್ಲ. ಹೀಗಾಗಿ ಈವರೆಗೂ ಬಾಬು ಅವರು ಕಳ್ಳನ ಬಗ್ಗೆ ಪೊಲೀಸ್ ದೂರು ನೀಡಿಲ್ಲ.




