ಅಂಕೋಲಾ: ಇನ್ನೂ ನೊಂದಣಿ ಸಹ ಆಗದ ಭಾರತ ಬೆಂಜ್ ಕಂಪನಿಯ ಹೊಸ ಲಾರಿ ಸುರೇಶ ಗೌಡ (33) ಎಂಬಾತರ ಬೈಕಿಗೆ ಗುದ್ದಿದ್ದರಿಂದ ಸುರೇಶ ಗೌಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಸಾವನಪ್ಪಿದ್ದಾರೆ. ಅವರ ಶವವನ್ನು ಆಂಬುಲೆನ್ಸ ಮೂಲಕ ಊರಾದ ಮಾಸ್ತಿಕಟ್ಟಾ ಸಮೀಪದ ಕ್ಯಾದಗಿ ಗ್ರಾಮಕ್ಕೆ ಸಾಗಿಸುವಾಗ ಯೋಗ್ಯ ರಸ್ತೆ ಇಲ್ಲದ ಕಾರಣ ತೊಂದರೆ ಅನುಭವಿಸಬೇಕಾಯಿತು.
ನ 8ರಂದು ಬಾಳೆಗುಳಿ ಕಡೆಯಿಂದ ಮನೆಗೆ ಬೈಕ್ ಮೂಲಕ ತೆರಳುತ್ತಿದ್ದ ಸುರೇಶ ಗೌಡ ಅವರಿಗೆ ಲಾರಿ ಗುದ್ದಿದ್ದರಿಂದ ಅವರು ರಸ್ತೆ ಪಕ್ಕ ಬಿದ್ದಿದ್ದರು. ಕಂಚಿನ ಬಾಗಿಲ ಬಳಿಯ ಬ್ರೋಗ್ರಿಬೈಲ್ ಬಳಿ ಅವರನ್ನು ನೋಡಿದ ಜನ ಅಂಕೋಲಾ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಅಲ್ಲಿಯೂ ಆತನ ಪರಿಸ್ಥಿತಿ ಕಷ್ಟ ಎಂದೆನಿಸಿದಾಗ ಮಂಗಳೂರಿಗೆ ಸಾಗಿಸುವ ಚಿಂತನೆ ನಡೆಸಿದರು. ಆಂಬುಲೆನ್ಸ ಮೂಲಕ ಮಂಗಳೂರಿಗೆ ಸಾಗಿಸುವ ವೇಳೆ ಭಟ್ಕಳದ ಬಳಿ ಸುರೇಶ ಗೌಡ ಉಸಿರಾಟ ನಿಲ್ಲಿಸಿದ್ದು, ಭಟ್ಕಳ ಆಸ್ಪತ್ರೆ ವೈದ್ಯರು ಅವರ ಸಾವನ್ನು ದೃಢಪಡಿಸಿದರು.
ಸುರೇಶ ಗೌಡ ಸಾವನಪ್ಪಿದ ಕಾರಣ ಆಂಬುಲೆನ್ಸ ಮೂಲಕ ಅವರ ಶವವನ್ನು ಅಂಕೋಲಾದ ಮಾಸ್ತಿಕಟ್ಟಾ ಸಮೀಪದ ಕ್ಯಾದಗಿ ಗ್ರಾಮಕ್ಕೆ ತರಲಾಯಿತು. ಆದರೆ, ಕ್ಯಾದಗಿ ಬಳಿಯಲ್ಲಿನ ಹಳ್ಳದಲ್ಲಿ ಆಂಬುಲೆನ್ಸ ದಾಟಲಿಲ್ಲ. ರಸ್ತೆ ಸರಿ ಇಲ್ಲದ ಕಾರಣ ಆಂಬುಲೆನ್ಸನ್ನು ಊರಿಗೆ ತರುವುದೇ ಸಾಹಸವಾಗಿತ್ತು. ಅದಾಗಿಯೂ ಆಂಬುಲೆನ್ಸ ಚಾಲಕ ಧೈರ್ಯದಿಂದ ಕ್ಯಾದಗಿ ಪ್ರವೇಶಿಸಿದ್ದು, ಮನೆಯವರೆಗೆ ವಾಹನದ ಮೂಲಕ ಶವ ಸಾಗಾಟ ಸಾಧ್ಯವಾಗಲಿಲ್ಲ. ಕೊನೆಗೆ ಊರಿನ ಕೆಲವರು ಸೇರಿ ಶವವನ್ನು ಮನೆಗೆ ಮುಟ್ಟಿಸಿದ್ದು, ಅಂತ್ಯ ಸಂಸ್ಕಾರ ಮಾಡಿದರು.




