ಕಾರವಾರ: ಹಬ್ಬುವಾಡ ಬಳಿಯ ಹರಿದೇವನಗರದ ಅಭಿಷೇಕ್ ಮಡಿವಾಳರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಅಭಿಷೇಕ ಮಡಿವಾಳ ಕಟ್ಟಡಗಳಿಗೆ ಬಣ್ಣ ಬಡಿಯುವ ಕೆಲಸ ಮಾಡುತ್ತಾರೆ. ಕೆಲಸದ ಅವಧಿಯಲ್ಲಿ ಅವರು ವ್ಯಕ್ತಿಯೊಬ್ಬರಿಗೆ ಬೈದಿದ್ದರು. ಇದೇ ಕಾರಣದಿಂದ ಆ ವ್ಯಕ್ತಿಯ ಸಹೋದರ ರಾಹುಲ್ ಮಾಸೂರಕರ್ ಎಂಬಾತರು ತನ್ನ ಸಹಚರ ಅಜಯ್ ಜೊತೆ ಅಭಿಷೇಕ ಮಡಿವಾಳರ ಮನೆಗೆ ನುಗ್ಗಿ ಹೊಡೆದಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಅಭಿಷೇಕರ ತಾಯಿ ಚೇತನಾ ಹಾಗೂ ತಮ್ಮ ಕಲ್ಲೇಶ ಸಹ ಪೆಟ್ಟು ತಿಂದಿದ್ದಾರೆ.
ನ 7ರ ರಾತ್ರಿ ಕೆಲಸ ಮುಗಿದ ನಂತರ ಅಭಿಷೇಕ ಮನೆಗೆ ಬಂದು ಮಲಗಿದ್ದರು. ಆಗ ಮನೆಗೆ ಏಕಾಏಕಿ ಅವರ ನುಗ್ಗಿದ ರಾಹುಲ್ ಹಾಗೂ ಅಜಯ್ ಸೇರಿ ಅಭಿಷೇಕರ ಮುಖದ ಮೇಲೆ ಗುದ್ದಿದ್ದಾರೆ. ಅದಾದ ನಂತರ ನೆಲಕ್ಕೆ ಬೀಳಿಸಿ ತುಳಿದಿದ್ದಾರೆ. ಮನೆಯಲ್ಲಿದ್ದ ಅಭಿಷೇಕ್ ಅವರ ತಾಯಿ ಹಾಗೂ ತಮ್ಮ ಹೊಡೆದಾಟ ತಪ್ಪಿಸಲು ಬಂದಾಗ ಅವರ ಮೇಲೆ ಸಹ ಹಲ್ಲೆ ನಡೆಸಿ ದೂಡಾಡಿದ್ದಾರೆ.
ಆಗ ಆ ಭಾಗದ ಜನರು ಆಗಮಿಸಿ ಈ ಹೊಡೆದಾಟ ತಪ್ಪಿಸಿದರು. ಆಗ ಆ ಇಬ್ಬರೂ ಆರೋಪಿತರು `ಇನ್ನೊಮ್ಮೆ ನಿನ್ನ ಜೀವ ತೆಗೆಯುವೆ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಷೇಕ್ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.




