ಶಿರಸಿ: ಅಧಿಕ ಪ್ರಮಾಣದಲ್ಲಿ ಕಾಡು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ವನ್ಯಜೀವಿಗಳು ಹೊಸತಲ್ಲ. ಆದರೆ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದನ್ನು ಜನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ!
ಕಳೆದ ಮೂರು ದಿನಗಳ ಹಿಂದೆ ಶಿರಸಿ ಸುತ್ತಲಿನ ಪ್ರದೇಶದಲ್ಲಿ ಕಾಡಾನೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅರಣ್ಯ ಸಿಬ್ಬಂದಿ ಜೊತೆ ಸ್ಥಳೀಯರು ಸೇರಿ ಆನೆ ನಗರ ಪ್ರವೇಶಿಸದಂತೆ ಪ್ರಯತ್ನಿಸಿದರು. ರಾತ್ರಿಯಿಡಿ ಕಾದರೂ ಕಾಡಾನೆಗಳ ರಂಪಾಟ ಕಡಿಮೆಯಾಗಿರಲಿಲ್ಲ.
ಅಂಬಾಗಿರಿ, ಗಾಂಧಿನಗರ, ರಾಮನಬೈಲ್, ಬನವಾಸಿ ರಸ್ತೆ, ತೋಟಗಾರಿಕಾ ಕಾಲೇಜು ಕಡೆ ಆನೆ ಸಂಚಾರ ನಡೆಸಿತು. ಬನವಾಸಿ ರಸ್ತೆಯ ಪೆಡಂಬೂಲ್ ಸಮೀಪದ ತೋಟಗಾರಿಕಾ ಕಾಲೇಜು ಸುತ್ತ ತಿರುಗಾಡುತ್ತಲಿತ್ತು. ತವರುಮನೆ ತೋಟದಲ್ಲಿ ಕಾಡಾನೆ ಠಿಕಾಣಿ ಹೂಡಿ ಆತಂಕ ಮೂಡಿಸಿತು. ಬನವಾಸಿ ರಸ್ತೆಯ ರೇಷ್ಮೆ ಇಲಾಖೆ ಅಕ್ಕ-ಪಕ್ಕದಲ್ಲಿ ಕಾಡಾನೆಗಳು ಕಾಣಿಸಿದವು. ಕುಳುವೆ ರಸ್ತೆ, ತೆರಕನಳ್ಳಿ ಕಾಡಿನ ಹಾದಿಯಲ್ಲಿ ಆನೆ ಸಂಚಾರದ ಕುರುಹುಗಳಿದ್ದವು. ಕೊನೆಗೆ ಕೆರೆಗೈ, ಗಡಳ್ಳಿ ಭಾಗಗಳಲ್ಲಿ ಸಂಚರಿಸಿ ಕಾಡು ಸೇರಿತು.
ಪ್ರಸ್ತುತ ತಾತ್ಕಾಲಿಕವಾಗಿ ಕಾಡಾನೆ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿ ಸಹ ಆನೆ ಓಡಿಸುವ ಸಾಹಸದಲ್ಲಿ ಒಮ್ಮೆ ಯಶಸ್ವಿಯಾಗಿದ್ದು, ಇದೀಗ ಅರಣ್ಯ ಇಲಾಖೆಗೆ ಇನ್ನೊಂದು ತಲೆನೋವು ಶುರುವಾಗಿದೆ. ಜನವಸತಿ ಹಾಗೂ ಜನ ಓಡಾಡುವ ರಸ್ತೆ ಮಾರ್ಗವಾಗಿ ರಾಜಾರೋಷವಾಗಿ ಚಿರತೆಗಳು ಸಂಚರಿಸುತ್ತಿವೆ. ಹೀಗಾಗಿ ವನ್ಯಪ್ರಾಣಿಗಳ ಆಗಮನದಿಂದ ಜನ ಭಯಭೀತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ ಹಾಗೂ ಚಿರತೆ ದಾಳಿಯಿಂದ ಮಾನವನ ಜೀವ ಹೋದ ಪ್ರಕರಣಗಳು ಅಷ್ಟಿಲ್ಲ. ಅದಾಗಿಯೂ ಆಕ್ರಮಣಕಾರಿ ಜೀವಿಗಳಲ್ಲಿನ ಆತಂಕ ಮನುಷ್ಯನಿಗೆ ತೊಂದರೆ ಮಾಡಲ್ಲ ಎನ್ನುವ ಹಾಗಿಲ್ಲ. ರಾತ್ರಿ ವೇಳೆ ಸಂಚರಿಸುವವರಿಗೆ ಚಿರತೆ ರಸ್ತೆಗೆ ಅಡ್ಡಲಾಗಿ ಕಾಣುತ್ತಿದೆ. ಬೆಳಕು ಬಂದ ದಿಕ್ಕಿನಲ್ಲಿಯೇ ಚಿರತೆಯೂ ಓಡುವ ವಿಡಿಯೋ ವೈರಲ್ ಆಗಿದೆ.
ಬನದಗೋಡಿನ ಪರಮೇಶ್ವರ್ ಅವರು ಸಂಚರಿಸುತ್ತಿದ್ದಾಗ ಚಿರತೆ ಕಾಣಿಸಿದ್ದು, ಅದರ ಚಲನ-ವಲನವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಸುಗ್ಗಾವಿ-ಬಿದ್ರಳ್ಳಿ ರಸ್ತೆಯಲ್ಲಿ ಕಳೆದ ಆರು ದಿನಗಳಿಂದ ಚಿರತೆ ಓಡಾಟದ ಬಗ್ಗೆ ಜನ ಅರಣ್ಯ ಇಲಾಖೆಗೆ ದೂರಿದ್ದಾರೆ. ಅರಣ್ಯ ಸಿಬ್ಬಂದಿ ಆ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು, ಚಿರತೆಯನ್ನು ಅಲ್ಲಿಂದ ಓಡಿಸಲು ನಾನಾ ತಂತ್ರ ಅನುಸರಿಸಿದ್ದಾರೆ.




