ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಬಳಿ ಲಾರಿಯೊಂದು ಗದ್ದೆಗೆ ಬಿದ್ದಿದೆ.
ಮಹಾರಾಷ್ಟ್ರದ ರುಶಿಕೇಶ್ ಪಿಸಾಲ್ ಎಂಬಾತರ ಲಾರಿಯಲ್ಲಿ ಔಷಧಿ ಸರಬರಾಜಾಗುತ್ತಿತ್ತು. ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಈ ಲಾರಿ ಸಂಚರಿಸುತ್ತಿತ್ತು. ನ 9ರಂದು ರಾತ್ರಿ ಸಂತೋಷ ಪೆರಾಲ್ ಎಂಬಾತ ಔಷಧಿ ತುಂಬಿದ ಲಾರಿಯನ್ನು ಓಡಿಸುತ್ತಿದ್ದ. 11 ಗಂಟೆಯ ವೇಳೆಗೆ ರಾಮಲಿಂಗೇಶ್ವರ ದೇವಾಲಯದ ಕಮಾನಿನ ಬಳಿ ಲಾರಿಗೆ ದನ ಅಡ್ಡ ಬಂದಿದ್ದು, ಇದರಿಂದ ಬೆದರಿದ ಚಾಲಕ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ.
ದನ ತಪ್ಪಿಸುವ ಬರದಲ್ಲಿ ಲಾರಿಯನ್ನು ಹೆದ್ದಾರಿ ಪಕ್ಕದ ಗದ್ದೆಗೆ ಇಳಿಸಿದ್ದು, ಲಾರಿ ಜಖಂ ಆಗಿದೆ. ಚಾಲಕನಿಗೆ ಎಲ್ಲಿಯೂ ಪೆಟ್ಟಾಗಿಲ್ಲ. ಲಾರಿ ಹಾನಿ ಮಾಡಿದ ಕಾರಣ ಚಾಲಕನ ವಿರುದ್ಧ ಮಾಲಕ ರುಶಿಕೇಶ್ ಪಿಸಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ವಿಮಾ ಪರಿಹಾರಕ್ಕಾಗಿ ಮೊರೆ ಹೋಗಿದ್ದಾರೆ.




