ಕಾರವಾರ: ಅಂಕೋಲಾ-ಕುಮಟಾ ನಡುವಿನ ಸಂಪರ್ಕಕೊoಡಿಯಾದ ಮಂಜುಗುಣಿ-ಗoಗಾವಳಿ ಸೇತುವೆ ಕಾಮಗಾರಿ ಶುರುವಾಗಿ ಆರು ವರ್ಷ ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಅದಾಗಿಯೂ ಅಧಿಕಾರಿಗಳು ವಾಹನ ಓಡಾಟಕ್ಕೆ ಅವಕಾಶ ನೀಡಿದ್ದು, ಕೂಡಲೇ ಬಾಕಿ ಕಾಮಗಾರಿ ಮುಗಿಸಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.
`ಈ ಸೇತುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ಹಲವು ರೀತಿಯ ಸಮಸ್ಯೆಗಳಾಗುತ್ತಿವೆ. ಎರಡು ವರ್ಷದ ಭಾರೀ ಪ್ರಮಾಣದ ಮಳೆಯ ವೇಳೆ ಇಲ್ಲಿ ಕೃತಕ ನೆರೆ ಪ್ರವಾಹ ಸೃಷ್ಠಿಯಾಗಿತ್ತು. ಪ್ರಸ್ತುತ ಸೇತುವೆ ಎರಡು ಕಡೆ ರಸ್ತೆ ಕೆಲಸ ನಡೆಸದೇ ಹಾಗೇ ಬಿಡಲಾಗಿದೆ. ಆ ಭಾಗದಲ್ಲಿ ಮಣ್ಣು ತುಂಬಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಕೂಡಲೇ ರಸ್ತೆ ಕೆಲಸ ಮುಗಿಸಬೇಕು’ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಆಗ್ರಹಿಸಿದರು.
`ಗೋಕರ್ಣ ಕ್ಷೇತ್ರಕ್ಕೆ ತೆರಳುವುದಕ್ಕಾಗಿ ನಿತ್ಯ ಸಾವಿರಾರು ಜನ ಈ ಮಾರ್ಗವಾಗಿ ಬರುತ್ತಾರೆ. ಸೇತುವೆಗೆ ಹೊಂದಿಕೊAಡು ರಸ್ತೆ ಸರಿಯಿಲ್ಲದ ಕಾರಣ ಪ್ರವಾಸಿಗರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಪೂರ್ಣ ಕಾಮಗಾರಿ ಕಾರಣ ಶಾಲಾ-ಕಾಲೇಜು ಮಕ್ಕಳು ಸಹ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸಂಘಟನೆಯ ರೋಷನ್ ಹರಿಕಂತ್ರ, ಸುದೇಶ ನಾಯ್ಕ ಹಾಗೂ ಸುನಿಲ ತಾಂಡೇಲ್ ವಿವರಿಸಿದರು.
`ಒಂದು ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಕಾಮಗಾರಿ ಅರೆಬರೆಯಾಗಿ ಬಿಡಲು ಸೂಕ್ತ ಕಾರಣ ನೀಡಬೇಕು. ಅದೂ ಆಗದೇ ಹೋದರೆ ಸ್ಥಳೀಯರ ಸಹಕಾರದಲ್ಲಿ ಹೋರಾಟ ನಡೆಸಲಾಗುತ್ತದೆ’ ಎಂದು ಸಂಘಟನೆ ಪ್ರಮುಖರಾದ ಮೋಹನ್ ಉಳ್ವೇಕರ್, ನಂದೀಶ್ ಮಾಜಾಳಿಕರ, ಗಣರಾಜ್ಯ ಟಾಕೇಕರ್ ಎಚ್ಚರಿಸಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಅವರು ಪತ್ರ ಸಲ್ಲಿಸಿದರು.




