ಕುಮಟಾ: ಇಲ್ಲಿನ ಸರ್ಕಾರಿ ಆಸ್ಪತ್ರೆ ಸುತ್ತ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದರೂ ವೈದ್ಯಾಧಿಕಾರಿಗಳು ಆ ಬಗ್ಗೆ ಗಮನಹರಿಸಿಲ್ಲ. ಪುರಸಭೆ ಅಧಿಕಾರಿಗಳಿಗೆ ದೂರೂ ನೀಡಿದರೂ ತ್ಯಾಜ್ಯ ತೆರವು ಮಾಡಿಲ್ಲ. ಹೀಗಾಗಿ ಜನಸಾಮಾನ್ಯರ ಕಲ್ಯಾಣ ಕೇಂದ್ರದವರು ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ವಾಟ್ಸಪ್ ಮೂಲಕ ದೂರು ಸಲ್ಲಿಸಿದ್ದಾರೆ.
ಅಕ್ಟೊಬರ್ ತಿಂಗಳಿನಲ್ಲಿ ಕೇಂದ್ರದ ಆಗ್ನೇಲ್ ರೋಡ್ರಿಗ್ರಿಸ್ ಈ ಬಗ್ಗೆ ವೈದ್ಯಾಧಿಕಾರಿ ಹಾಗೂ ಪುರಸಭೆಯವರ ಗಮನಕ್ಕೆ ತಂದಿದ್ದರು. ನ 4ರಂದು ಸಹ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಈ ಬಗ್ಗೆ ಅಧಿಕಾರಿಗಳಿಗೆ ದೂರಿದ್ದರು. ಆ ವೇಳೆ ಪುರಸಭೆಯವರು ಸ್ವಚ್ಛತೆ ಕಾಪಾಡುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಅಲ್ಲಿನ ತ್ಯಾಜ್ಯದ ರಾಶಿ ಕಡಿಮೆ ಆಗಿಲ್ಲ.
`ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಜನ ಒಳರೋಗಿಗಳಿದ್ದು, ಅವರ ಆರೋಗ್ಯದ ಮೇಲೆ ತ್ಯಾಜ್ಯದ ರಾಶಿ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಅರಿವಿದ್ದರೂ ಕ್ರಮ ಜರುಗಿಸುತ್ತಿಲ್ಲ’ ಎಂದು ಅವರು ದೂರಿದ್ದಾರೆ.




