ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಪ್ರತಿ ಭಾನುವಾರ ಬೆಳಗ್ಗೆ ಕಾರವಾರದ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಪುಸ್ತಕ ಧ್ಯಾನ ಮಾಡಲಿದ್ದಾರೆ. ಈ ಓದುಗರ ಮೌನ ಸಂತೆಯಲ್ಲಿ ನೀವು ಭಾಗವಹಿಸಬಹುದು!
ಪ್ರತಿ ಭಾನುವಾರ ಬೆಳಗ್ಗೆ 9ಗಂಟೆಯಿoದ 11 ಗಂಟೆಯವರೆಗೆ ಕಡಲತೀರದಂಚಿನ ಉದ್ಯಾನವನದಲ್ಲಿ `ಪುಸ್ತಕ ಓದು’ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ. ನೊಂದಣಿ ಶುಲ್ಕವಿಲ್ಲ. ನೀವು ಓದಿದ ಪುಸ್ತಕದ ಬಗ್ಗೆ ನಾಲ್ಕು ಮಾತನಾಡಬಹುದು. ಹೊಸ ಪುಸ್ತಕಗಳನ್ನು ಓದಬಹುದು. ನಿಮ್ಮ ಪುಸ್ತಕವನ್ನು ಬೇರೆಯವರಿಗೆ ಕೊಟ್ಟು ಅವರ ಬಳಿಯಿದ್ದ ಪುಸ್ತಕವನ್ನು ನೀವು ಪಡೆದು ಒಟ್ಟಿಗೆ ಓದಬಹುದು!
ಓದು ಮನುಷ್ಯನ ಜ್ಞಾನ ವಿಕಸಕ್ಕೆ ಪೂರಕ. ಸಮಾನ ಮನಸ್ಕರೊಂದಿಗೆ ಕುಳಿತು ಓದುವುದು, ಹೆಚ್ಚು ಓದಲು ಇನ್ನಷ್ಟು ಪ್ರೇರಣೆ ನೀಡಲಿದೆ. ಇದಕ್ಕೆ ಪೂರಕವೆಂಬoತೆ ಇದೇ ಮೊದಲ ಬಾರಿಗೆ ನಮ್ಮಿಷ್ಟದ ಪುಸ್ತಕವನ್ನು ತಂದು ಪ್ರಕೃತಿಯ ಮಡಿಲಲ್ಲಿ ಓದುವ ಬಗ್ಗೆ ಜಿಲ್ಲಾಧಿಕಾರಿ ಚಿಂತಿಸಿದ್ದಾರೆ. ಪುಸ್ತಕ ಪ್ರಿಯರೊಂದಿಗೆ ಓದಿ ಆನಂದಿಸುವ `ಕಾರವಾರ ರೀಡ್ಸ್’ ಎಂಬ ವಿನೂತನ ಕಾರ್ಯಕ್ರಮ ಪ್ರತಿ ಭಾನುವಾರವೂ ನಡೆಯಲಿದೆ. ಹೊಸ ಪುಸ್ತಕಗಳನ್ನು ಅನ್ವೇಷಿಸುವ ಮೂಲಕ ಓದುವ ಆನಂದವನ್ನು ಪುನ: ಹುಡುಕುವ, ಪುಸ್ತಕ ಪ್ರಿಯರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಅವಕಾಶ ಇಲ್ಲಿ ಸಿಗುತ್ತದೆ. ಸಮಾನ ಮನಸ್ಕರೊಂದಿಗೆ ಸ್ನೇಹ ಬೆಳೆಸಿ, ತಮ್ಮ ಪುಸ್ತಕಗಳನ್ನು ಬದಲಾಯಿಸಿಕೊಳ್ಳುವ ಉದ್ದೇಶವನ್ನು ಈ ಕಾರ್ಯಕ್ರಮ ಒಳಗೊಂಡಿದೆ.
ಕುಡಿಯುವ ನೀರು, ಕುಳಿತುಕೊಳ್ಳಲು ಮ್ಯಾಟ್ ಜೊತೆ ಇಷ್ಟದ ಪುಸ್ತಕ ಹಿಡಿದು ಬರುವುದು ಮಾತ್ರ ನಿಮ್ಮ ಕೆಲಸ. ಓದಿನ ಜೊತೆಗೆ ಒಂದಷ್ಟು ಮಾತುಕಥೆ ಮುಂದುವರೆಯುತ್ತದೆ. ಕೊನೆಗೆ ಗ್ರೂಫ್ ಫೋಟೋ ಜೊತೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಇಷ್ಟದ ಪುಸ್ತಕದ ಬಗ್ಗೆ ಮಾತನಾಡಲು ನೀವೆಲ್ಲರೂ ಬರ್ತಿರಲ್ವ?





