ಯಲ್ಲಾಪುರ: ನಾಯ್ಕನಕೆರೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಈ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಡಿಸೆಂಬರ್ 13ರಿಂದ 15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗರ್ಭಗುಡಿಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ನವೆಂಬರ 27ರಿಂದ ಯಲ್ಲಾಪುರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಥಯಾತ್ರೆ ಆಯೋಜಿಸಲಾಗಿದೆ. ತಾಲೂಕಿನ ವಿವಿಧ ದೇವಸ್ಥಾನಗಳ ತೀರ್ಥ ಸಂಗ್ರಹವೂ ನಡೆಯಲಿದೆ. ಈಗಾಗಲೇ ದ್ವಾದಶ ಜ್ಯೋತಿರ್ಲಿಂಗಗಳ ತೀರ್ಥವನ್ನು ತರಲಾಗಿದ್ದು ವಿವಿಧ ದೇವಾಲಯಗಳ ತೀರ್ಥವನ್ನು ದತ್ತಗುರುವಿನ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಬಳಸಲಾಗುತ್ತದೆ.
ಶ್ರೀ ದತ್ತಗುರುವಿನ ರಥಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡುವದರ ಜೊತೆ ಅಕ್ಕಿ-ಕಾಯಿ-ಬೆಲ್ಲ-ಬೇಳೆಗಳನ್ನು ಸಹ ನೀಡಲು ಅವಕಾಶವಿದೆ. ಲೋಕಾರ್ಪಣೆಯ ಮೂರೂ ದಿವಸ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ವಿವಿಧ ಸಮಾಜದ 12 ಉಪಸಮಿತಿಗಳು ಕೆಲಸ ನಿರ್ವಹಿಸುತ್ತಿವೆ.

ದತ್ತ ಮಂದಿರ ಲೋಕಾರ್ಪಣಾ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಕ್ಷೇತ್ರಕ್ಕೆ ಭೇಟಿ ನೀಡಿ ಕೆಲಸ ಕಾರ್ಯಗಳ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು `ರಾಜ್ಯದಲ್ಲೇ ಈ ಮಂದಿರ ಹೆಸರುಗಳಿಸುವುದರಲ್ಲಿ ಸಂಶಯವಿಲ್ಲ. ದತ್ತನ ಸನ್ನಿಧಾನಕ್ಕಾಗಿ ಭಕ್ತರು ಗಾಣಗಾಪುರಕ್ಕೆ ತೆರಳುತ್ತಿದ್ದರು. ಮುಂದಿನ ದಿನಗಳಲ್ಲಿ ಗಾಣಗಾಪುರದ ಜನರೇ ಈ ಮಂದಿರಕ್ಕೆ ಭೇಟಿ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದರು.
ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಲೋಕಾರ್ಪಣಾ ಸಮಿತಿಯ ಅಧ್ಯಕ್ಷ ಪ್ರಮೋದ ಹೆಗಡೆ, ನಿರ್ಮಾಣ ಹಾಗೂ ಲೋಕಾರ್ಪಣಾ ಸಮಿತಿಯ ಪ್ರಮುಖರಾದ ಶ್ರೀರಂಗ ಕಟ್ಟಿ, ಪ್ರಮುಖರಾದ ಮಹೇಶ ಚಿಟ್ನಳ್ಳಿ, ಎಸ್.ವಿ.ಯಾಜಿ, ಶಾಂತಾರಾಮ ಹೆಗಡೆ, ವೇಣುಗೋಪಾಲ ಮದ್ಗುಣಿ, ನಾಗೇಶ ಯಲ್ಲಾಪುರಕರ್, ಮುರಳಿ ಹೆಗಡೆ, ಸಿ.ಜಿ.ಹೆಗಡೆ, ಮಹೇಶ ಗೌಳಿ, ನಾಗರಾಜ ಮದ್ಗುಣಿ, ಪ್ರಸಾದ ಹೆಗಡೆ, ರಮೇಶ ಹೆಗಡೆ, ನಾರಾಯಣ ನಾಯಕ, ಕೆ.ಟಿ.ಭಟ್ಟ, ಶಿವಾನಂದ ಹೆಗಡೆ ಇತರರಿದ್ದರು.





