ಶಿರಸಿ: ಬಾಲಕಿ ಅತ್ಯಾಚಾರ ಆರೋಪ ಸಾಭೀತಾದ ಹಿನ್ನಲೆ ಸುನೀಲ ಬೋವಿವಡ್ಡರ್ ಎಂಬಾತನಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡ ಪಾವತಿಸಲು ಸೂಚಿಸಿದೆ.
ಶಿರಸಿ ತಾಲೂಕಿನ ಕುಪಗಡ್ಡೆಯ ಸುನೀಲ್ ಸುರೇಶ ಬೋವಿವಡ್ಡರ್ 2021ರ ನವೆಂಬರ್ 11ರಂದು ಬನವಾಸಿ ಬಳಿ ಬಾಲಕಿ ಮೇಲೆ ಕೈ ಹಾಕಿದ್ದ. ಆಕೆ ಪ್ರತಿಭಟಿಸಿದರೂ ಮನ್ನಿಸದೇ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗ ಸಿಪಿಐ ಆಗಿದ್ದ ರಾಮಚಂದ್ರ ನಾಯಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜೊತೆಗೆ ಅತ್ಯಾಚಾರ ನಡೆದ ಕುರಿತು ಪೂರಕ ಸಾಕ್ಷಿಗಳನ್ನು ಒದಗಿಸಿದ್ದರು.
ಸಂತ್ರಸ್ತ ಬಾಲಕಿ ಪರವಾಗಿ ಸರಕಾರಿ ಅಭಿಯೋಜಕರಾದ ಶುಭಾ ಗಾಂವಕರ್ ಹಾಗು ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಅತ್ಯಾಚಾರ ಆರೋಪಿಯ ಕ್ರೂರತೆಯ ಬಗ್ಗೆ ಅವರು ಸಮರ್ಥವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶೆ ಪ್ರತಿಭಾ ಕುಲಕರ್ಣಿ ಅವರು ಶಿಕ್ಷೆ ಪ್ರಕಟಿಸಿದರು. 20 ವರ್ಷ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ದಂಡ ಪಾವತಿಸುವಂತೆ ಅವರು ಆದೇಶ ಹೊರಡಿಸಿದರು.




