ಭಟ್ಕಳ: ದೇವರ ಮುಂದೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಜ್ವಾಲೆ ಉರಿದ ತಾಪಕ್ಕೆ ಮನೆಯಲ್ಲಿದ್ದ ಶಾಲಾ ಮಕ್ಕಳ ಪಠ್ಯ, ಬಟ್ಟೆ-ಬ್ಯಾಗುಗಳ ಜೊತೆ ಆಹಾರ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ.
ಬೆಳ್ನಿ ಗ್ರಾಮದ ಜ್ಯೋತಿ ಮೋಹನ ನಾಯ್ಕ ಅವರು ದೇವರಿಗೆ ದೀಪ ಹಚ್ಚಿ ಶನಿವಾರ ಸಂಜೆ ಮಾರುಕಟ್ಟೆಗೆ ಹೋಗಿದ್ದರು. ಅವರು ಮಾರುಕಟ್ಟೆಯಿಂದ ಮರಳಿದಾಗ ಅವರಿಗೆ ಮನೆಯೇ ಇರಲಿಲ್ಲ. ಬೆಂಕಿ ಜ್ವಾಲೆಯಲ್ಲಿ ಮನೆ ಉರಿಯುತ್ತಿರುವುದನ್ನು ನೋಡಿ ಆ ಕುಟುಂಬದವರು ಕಣ್ಣೀರಾದರು.
ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಅಕ್ಕ-ಪಕ್ಕದವರು ಅದನ್ನು ನಂದಿಸುವ ಪ್ರಯತ್ನ ಮಾಡಿದರು. ಅಲ್ಲಿದ್ದ ಬಾವಿಯಿಂದ ನೀರು ತಂದು ಚೆಲ್ಲಿದರು. ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಮನೆ ಮಾಲಕ ಮೋಹನ್ ನಾಯ್ಕ ಅವರಿಗೂ ಕೆಲವರು ಫೋನ್ ಮಾಡಿದರು. ಆದರೆ, ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ.
ಮಾರುಕಟ್ಟೆಗೆ ಹೋಗಿದ್ದ ಮೋಹನ ನಾಯ್ಕ ಅವರ ಕುಟುಂಬ ಮರಳಿ ಬರುವುದರೊಳಗೆ ಇಡೀ ಮನೆ ಕರಕಲಾಗಿತ್ತು.




