ಯಲ್ಲಾಪುರ: ಪ್ರೀತಿ ಪ್ರೇಮದ ವಿಷಯವಾಗಿ ನಡೆದ ಕಲಹ ಹೊಡೆದಾಟದ ಸ್ವರೂಪ ಪಡೆದಿದ್ದು, ತಡರಾತ್ರಿ ನಡೆದು ಹೋಗುತ್ತಿದ್ದ ಕೊಡ್ಲಗದ್ದೆಯ ಮಹೇಶ ನಾಯ್ಕ (28) ಎಂಬಾತರನ್ನು ಐವರು ಸೇರಿ ಥಳಿಸಿದ್ದಾರೆ.
ಕೊಡ್ಲಗದ್ದೆ ಖಡಾಸಿಗೆಯ ಮಹೇಶ ಕೃಷ್ಣ ನಾಯ್ಕ ಅವರು ಮೂರಜ್ಯಾನ್ ರಾಜಸಾಬ್ (ಯುವತಿ ಹೆಸರು ಬದಲಿಸಿದೆ) ಎಂಬಾತರನ್ನು ಪ್ರೀತಿಸುತ್ತಿದ್ದರು. ಆ ಯುವತಿ ಗುಳ್ಳಾಪುರದ ನೂರಸಾಬ್ ಬೆಳವಣಿಗೆ ಅವರ ತಂಗಿಯಾದ ಕಾರಣ ಮಹೇಶ ನಾಯ್ಕ ವಿರುದ್ಧ ನೂರಸಾಬ್ ಸಿಟ್ಟಾಗಿದ್ದರು.
ನ 24ರಂದು ರಾತ್ರಿ 11.30ಕ್ಕೆ ಗುಳ್ಳಾಪುರದ ದುರ್ಗಾದೇವಿ ದೇವಸ್ಥಾನದ ಬಳಿ ಮಹೇಶ ನಾಯ್ಕ ಒಂಟಿಯಾಗಿ ಹೋಗುತ್ತಿದ್ದರು. ಆಗ ಅವರನ್ನು ನೂರಸಾಬ್ ಅವರನ್ನು ಅಡ್ಡಗಟ್ಟಿದರು. ನೂರಸಾಬ ಜೊತೆ ಬಂದಿದ್ದ ಅರುಣ ಮಡಿವಾಳ, ಹನುಮಂತ, ಪ್ರಶಾಂತ ಪಟಗಾರ, ಪಾತಿಮಾ ಸೇರಿ ಮಹೇಶ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದರು.
`ನಮ್ಮ ಊರಿನ ಹುಡುಗಿಯನ್ನು ಪ್ರೀತಿಸುತ್ತೀಯಾ?’ ಎಂದು ಪ್ರಶ್ನಿಸಿದರು. ಈ ವೇಳೆ ನೂರಸಾಬ ಹಾಗೂ ಪಾತಿಮಾ ಇಬ್ಬರು ಕಟ್ಟಿಗೆಯಿಂದ ಬಾರಿಸಿದರು. ನೆಲಕ್ಕೆ ಬಿದ್ದ ಮಹೇಶ ನಾಯ್ಕ ಮೇಲೆ ಅರುಣ ಮಡಿವಾಳ ಕಲ್ಲಿನಿಂದ ಹೊಡೆದರು.
ಕೊನೆಗೆ `ಮತ್ತೆ ಹುಡುಗಿ ವಿಷಯಕ್ಕೆ ಬಂದರೆ ಹುಷಾರು’ ಎಂದು ಬೆದರಿಸಿ ಅಲ್ಲಿಂದ ಹೊರಟರು.`ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿ, ತನಗೆ ರಕ್ಷಣೆ ಒದಗಿಸಿ’ ಎಂದು ಮಹೇಶ ನಾಯ್ಕ ಇದೀಗ ಪೊಲೀಸ್ ದೂರು ನೀಡಿದ್ದಾರೆ.




