ಶಿರಸಿ: ದಿವಗಿ ಟ್ರಾನ್ಸಮಿಶನ್ ಸಿಸ್ಟಂ & ಟೆಕ್ನಾಲಜಿಸಿ ಪ್ರೈ ಲಿ ಕಂಪನಿಯಲ್ಲಿ ಕಬ್ಬಿಣ ಕಳ್ಳತನವಾಗಿದೆ. ಅಲ್ಲಿ ಕೆಲಸ ಮಾಡುವ ನೌಕರರೇ ಸೇರಿ ಕಳ್ಳತನ ನಡೆಸಿದ್ದಾರೆ.
ನ 13ರಂದು ರಾತ್ರಿ 12.48ಕ್ಕೆ ಕಂಪನಿಯಲ್ಲಿ ಆಪರೇಟರ್ ಆಗಿರುವ ಪವನಮೂರ್ತಿ ಕಂಪನಿಯ ಉತ್ಪಾದಕ ವ್ಯವಸ್ಥಾಪಕ ಪರಮೇಶ್ವರ ಮಡಿವಾಳ ಅವರಿಗೆ ಫೋನ್ ಮಾಡಿದ್ದರು. `ಇಲ್ಲಿ ಕಾರ್ಮಿಕರಾಗಿರುವ ಶಿವಾನಂದ ಗೌಡ ಹಾಗೂ ಮಣಿಕಂಠ ಪೂಜಾರಿ ಸೇರಿ ಕಬ್ಬಿಣದ ಬಿಡಿಭಾಗಗಳನ್ನು ಕದ್ದು ಸಾಗಿಸುತ್ತಿದ್ದಾರೆ’ ಎಂದವರು ಮಾಹಿತಿ ನೀಡಿದ್ದರು. `ಕಪ್ಪು ಬಣ್ಣದ ಕಾರಿನಲ್ಲಿ ಕಬ್ಬಿಣ ಸಾಗಾಟವಾಗುತ್ತಿದೆ’ ಎಂದು ಪವನಮೂರ್ತಿ ಹೇಳಿದ್ದರು.
ಪರಮೇಶ್ವರ ಮಡಿವಾಳ ತಕ್ಷಣ ಅಲ್ಲಿ ಕರ್ತವ್ಯದಲ್ಲಿದ್ದ ಸುಪ್ರವೈಸರ್ ನಿಖಿಲ್ ಡಯಾಸ್’ಗೆ ಫೋನ್ ಮಾಡಿದ್ದರು. ಆದರೆ, `ಇಲ್ಲಿ ಯಾರು ಇಲ್ಲ. ಯಾವುದೇ ಕಳ್ಳತನ ನಡೆದಿಲ್ಲ’ ಎಂದು ನಿಖಿಲ್ ಉತ್ತರಿಸಿದ್ದರು. ಮರುದಿನ ಬೆಳಗ್ಗೆ ತಪಾಸಣೆ ನಡೆಸಿದಾಗ 300 ಕೆಜಿ ಕಬ್ಬಿಣದ ಬಿಡಿಭಾಗಗಳು ಕಣ್ಮರೆಯಾಗಿರುವುದು ಗಮನಕ್ಕೆ ಬಂದಿತು. ಶಿರಸಿ ಕುಳವೆ ಕೋಣರಮನೆಯ ಶಿವಾನಂದ ಗೌಡ ಹಾಗೂ ಗಿಡಮಾವಿನಕಟ್ಟೆಯ ಮಣಿಕಂಠ ಪೂಜಾರಿ ಅವರನ್ನು ಕರೆದು ವಿಚಾರಿಸಿದಾಗ 21 ಸಾವಿರ ರೂ ಮೌಲ್ಯದ ಕಬ್ಬಿಣ ಕದ್ದಿರುವುದನ್ನು ಒಪ್ಪಿಕೊಂಡಿದ್ದರು.
ಜೊತೆಗೆ ಈ ಹಿಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೀವನಗರದ ಲೋಹಿತ ನಾಯ್ಕ, ಕುಮಟಾ ಹೊಲನಗದ್ದೆ ಗುಡೆಅಂಗಡಿಯ ಅಭಿಷೇಕ ನಾಯ್ಕ, ಉಂಚಳ್ಳಿಯ ನಿತ್ಯಾನಂದ ಗೌಡ ಹಾಗೂ ಬಿಸಲಕೊಪ್ಪದ ಕುತುಬಿದ್ಧೀನ್ ಬಸೀರ್ ಸಹ ಕಳ್ಳತನ ನಡೆಸಿದ ಬಗ್ಗೆ ಮಾಹಿತಿ ನೀಡಿದ್ದರು. ಕದ್ದ ವಸ್ತುಗಳನ್ನು ಗಣೇಶ ನಗರದ ಗುಜುರಿ ವ್ಯಾಪಾರಿ ಕೇಶವ’ಗೆ ಮಾರಾಟ ಮಾಡುವುದಾಗಿಯೂ ಬಾಯ್ಬಿಟ್ಟಿದ್ದರು. ಇದರೊಂದಿಗೆ ಇತರೆ ಗುಜುರಿ ವ್ಯಾಪಾರಿಗಳಿಗೂ ಮಾರಾಟ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದರು.
`ಈ ಕಳ್ಳತನದಲ್ಲಿ ಕಂಪನಿ ಸುಪ್ರವೈಸರ್ ಆಗಿರುವ ರಾಮನಬೈಲಿನ ನಿಖಿಲ್ ಡಯಾಸ್ ಸಹ ಶಾಮೀಲಾಗಿದ್ದಾರೆ. ಇದರೊಂದಿಗೆ ಶಿವಾನಂದ ಗೌಡ, ಮಣಿಕಂಠ ಪೂಜಾರಿ, ಲೋಹಿತ ನಾಯ್ಕ, ಅಭಿಷೇಕ ನಾಯ್ಕ, ನಿತ್ಯಾನಂದ ಗೌಡ, ಕುತುಬಿದ್ಧೀನ್ ಬಸೀರ್ ಸಹ ಸಾಕಷ್ಟು ಬಾರಿ ಕಳ್ಳತನ ಮಾಡಿದ್ದು, ಕಳ್ಳತನ ವಸ್ತು ಖರೀದಿಸಿದ ಗುಜುರಿ ವ್ಯಾಪಾರಿ ಕೇಶವ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ದಿವಗಿ ದಿವಗಿ ಟ್ರಾನ್ಸಮಿಶನ್ ಸಿಸ್ಟಂ & ಟೆಕ್ನಾಲಜಿಸಿ ಪ್ರೆöÊ ಲಿ ಕಂಪನಿಯ ಉತ್ಪಾದಕ ವ್ಯವಸ್ಥಾಪಕ ಪರಮೇಶ್ವರ ಮಡಿವಾಳ ಪೊಲೀಸ್ ದೂರು ನೀಡಿದ್ದಾರೆ.




