ಕುಮಟಾ: ನಾಡಬಾಂಬು ಹಾಗೂ ಇತರೆ ಆಯುಧಗಳನ್ನು ಬಳಸಿ ವನ್ಯಜೀವಿ ಕೊಂದು ಪಾರ್ಟಿ ಮಾಡುತ್ತಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.
ಕುಮಟಾದ ಕತಗಾಲ ಬಳಿಯ ಆಳಕೋಡ ಅರಣ್ಯ ಪ್ರದೇಶಕ್ಕೆ ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ (70) ಶಿಖಾರಿಗೆ ಹೋಗಿದ್ದರು. ಎಡತಾರೆ ಗ್ರಾಮದ ಗುರುಪ್ರಸಾದ ಗೌಡ (30) ಹಾಗೂ ಜಯಂತ ಶಂಕರ ಗೌಡ (42) ಅವರ ಹಿಂದೆ ಬ್ಯಾಟರಿ ಬೆಳಕಿನಲ್ಲಿ ಸಂಚರಿಸುತ್ತಿದ್ದರು. ಹೊನ್ನಾವರ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ ಕೆ ಶಿಖಾರಿಗೆ ಹೋಗುವವರ ಹುಡುಕಾಟದಲ್ಲಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಅವರಿಗೆ ಈ ಮೂವರು ಅರಣ್ಯದಲ್ಲಿ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು.
ನಾಡಬಾಂಬು ಹಾಗೂ ಇತರೆ ಆಯುಧಗಳೊಂದಿಗೆ ಮೂವರು ಕಾಡು ಪ್ರವೇಶಿಸಿದ ಬಗ್ಗೆ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ಖಚಿತಪಡಿಸಿಕೊಂಡರು. ಎದುರಾಳಿಗಳು ದಾಳಿ ಅಧಿಕಾರಿಗಳ ಮೇಲೆಯೂ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಕಾರ್ಯಾಚರಣೆಗೆ ದೊಡ್ಡ ತಂಡ ರಚಿಸಿದರು.
ಉಪ ವಲಯ ಅರಣ್ಯಾಧಿಕಾರಿ ಹೂವಣ್ಣ ಗೌಡ, ಹರೀಶ್ಚಂದ್ರ ಪಟಗಾರ, ಗಸ್ತು ಅರಣ್ಯ ಪಾಲಕ ಮಹೇಶ ಹವಳೆಮ್ಮನವರ್, ಸದಾಶಿವ ಪುರಾಣಿಕ್, ಭರತ್ ಕುಮಾರ್ ಬಿ, ಮಾಳಪ್ಪ ಮಾಕೊಂಡ ಹಾಗೂ ತಾರಾ ನಾಯ್ಕ ಸೇರಿ ಕಾಡು ಸುತ್ತುವರೆದರು. ಅಷ್ಟರೊಳಗಾಗಿ ಶಿಖಾರಿ ಶೂರರು ಕಾಡು ಹಂದಿ, ಕಡವೆ ಕೊಂದು ಮನೆಗೆ ತಂದಿದ್ದರು.
ವನ್ಯಜೀವಿಗಳ ಅಂಗಾoಗಗಳನ್ನು ತುಂಡು ಮಾಡಿ, ಬೇರೆ ಕಡೆ ಸಾಗಿಸುವ ವೇಳೆಯಲ್ಲಿ ಅರಣ್ಯಾಧಿಕಾರಿಗಳ ತಂಡದವರು ದಾಳಿ ಮಾಡಿದರು. 45 ಕೆಜಿ ಮಾಂಸ, ಕಡವೆಯ ಕೋಡು, ಬಂದೂಕಿನ ಗುಂಡು, ಬೈಕು-ಬ್ಯಾಟರಿ, ಕತ್ತಿ,ಮೊಬೈಲುಗಳನ್ನು ವಶಕ್ಕೆ ಪಡೆದರು. ಸಿಕ್ಕಬಿದ್ದ ಮೂವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.




