ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆಯಲ್ಲಿ ಸಿಕ್ಕದ ಮೂಳೆ ಯಾರದು? ಎಂಬ ಬಗ್ಗೆ ಈವರೆಗೂ ಉತ್ತರ ಬಂದಿಲ್ಲ. ಡಿಎನ್ಎ ಪರೀಕ್ಷೆಗೆ ಹೋದ ಮೂಳೆ ವರದಿ ಜಿಲ್ಲಾಡಳಿತಕ್ಕೆ ಸಿಕ್ಕಿಲ್ಲ. ಪ್ರಸ್ತುತ ಕಳೆದ ಭಾನುವಾರ ನಡೆದ ಭೂ ಕಂಪನಕ್ಕೆ ಕಾರಣ ಕುರಿತಾದ ವರದಿ ಸಹ ಇನ್ನೂ ಬಂದಿಲ್ಲ!
ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರ ಪೈಕಿ ಲೋಕೇಶ ಹಾಗೂ ಜಗನ್ನಾಥರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನದಿ ಆಳದಲ್ಲಿ ಸಿಕ್ಕಿದ ಮೂಳೆಯ ವೈದ್ಯಕೀಯ ವರದಿ ಸಹ ಸಲ್ಲಿಕೆಯಾಗಿಲ್ಲ. ವೈದ್ಯಕೀಯ ಪರೀಕ್ಷೆ ವೇಳೆ ನಡೆದ ಎಡವಟ್ಟಿನಿಂದ ಡಿಎನ್ಎ ವರದಿ ಬಂದಿಲ್ಲ ಎಂಬುದು ಖಚಿತವಾಗಿದ್ದರೂ, ಅದಕ್ಕೆ ಹೊಣೆಗಾರರು ಯಾರು? ಎಂದು ಬಹಿರಂಗವಾಗಿ ಹೇಳಿದವರಿಲ್ಲ. ಅಲ್ಲಿನ ಭೂ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಜನ ದೂರುತ್ತಿದ್ದರೂ, ಆ ಬಗ್ಗೆ ನಡೆದ ಅಧ್ಯಯನಗಳ ಬಗ್ಗೆ ಮಾಹಿತಿಯಿಲ್ಲ.
ಇನ್ನೂ ಕಳೆದ ಭಾನುವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಭೂ ಕಂಪನಕ್ಕೆ ಸಂಬoಧಿಸಿ ಈವರೆಗೂ ಜಿಲ್ಲಾಡಳಿತಕ್ಕೆ ವಿಜ್ಞಾನಿಗಳ ವರದಿ ಸಲ್ಲಿಕೆಯಾಗಿಲ್ಲ. ಸೋಮವಾರ ಮಧ್ಯಾಹ್ನ ಜಿಲ್ಲೆಗೆ ಬಂದ ವಿಜ್ಞಾನಿಗಳು ಅಲ್ಲಲ್ಲಿ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಆದರೆ, ಅಧ್ಯಯನ ವರದಿಯನ್ನು ಅವರು ಸಲ್ಲಿಕೆ ಮಾಡಿಲ್ಲ. ಹೀಗಾಗಿ ಭೂ ಕಂಪನಕ್ಕೆ ಕಾರಣ, ಮುಂದೆ ಎದುರಾಗಬಹುದಾದ ಅಪಾಯ ಹಾಗೂ ವಹಿಸಬೇಕಾದ ಮುನ್ನಚ್ಚರಿಕೆಗಳ ಬಗ್ಗೆ ಜನ ಇನ್ನೂ ಆತಂಕದಲ್ಲಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಭೂಕಂಪನ ಆದ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಮೊದಲು ಹೇಳಿಕೆ ನೀಡಿತ್ತು. ಮರುದಿನ ಭೂ ಕಂಪ ನಡೆದ ಬಗ್ಗೆ ಕೇಂದ್ರ ಸರ್ಕಾರದ ವೆಬ್ಸೈಟಿನಲ್ಲಿ ದಾಖಲಾಗಿತ್ತು. ಅದಾದ ನಂತರ ವಿಜ್ಞಾನಿಗಳು ಜಿಲ್ಲೆಗೆ ಬಂದು ಅಧ್ಯಯನ ನಡೆಸಿದ್ದರು. ಬೃಹತ್ ಆಣೆಕಟ್ಟು, ಜಲಾಶಯ, ಕೈಗಾ ಅಣುಸ್ಥಾವರ ಸೇರಿದಂತೆ ಸೂಕ್ಷ್ಮ ವಲಯಗಳಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಘಟಿಸಿದ ಭೂಕಂಪನದ ಬಗ್ಗೆ ಸರ್ಕಾರ ವಿಫಲವಾದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದ್ದವು.
ಉ.ಕ ಜಲ್ಲೆಯ ಸೂಪಾದ ಭೂಕಂಪ ಮಾಪನ ಕೇಂದ್ರ ಹಾಳಾಗಿದೆಯೇ? ಎಂದು ಜನ ಅನೇಕರು ಪ್ರಶ್ನಿಸಿದ್ದರು. `ಸತತ ಮಳೆಯಿಂದ ಎಲ್ಲ ಆಣೆಕಟ್ಟುಗಳು ಭರ್ತಿ ಆಗಿದ್ದು, ಇಂಥ ಸಂದರ್ಭದಲ್ಲೇ ಭೂಕಂಪನಗಳು ಘಟಿಸುವ ಅವಕಾಶ ಹೆಚ್ಚಿರುತ್ತವೆ’ ಎಂದು ಕೆಲ ಭೂ ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ಇದೀಗ ವಿಜ್ಞಾನಿಗಳು ನೀಡುವ ವರದಿಯ ಬಗ್ಗೆ ಎಲ್ಲರ ಗಮನವಿದೆ. ಶಿರೂರು ವೈದ್ಯಕೀಯ ವರದಿಯಂತೆ ಇಲ್ಲಿ ಯಾವುದೇ ಎಡವಟ್ಟು ಆಗದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.
`ಅಧ್ಯಯನ ನಡೆಸಿದ ವಿಜ್ಞಾನಿಗಳು ವರದಿ ನೀಡಲು ಇನ್ನೂ ಎರಡು ದಿನ ಬೇಕಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




